ADVERTISEMENT

‘ಸಮಾಜ ಸುಧಾರಣೆಗೆ ಸಾಹಿತ್ಯ ಅಧ್ಯಯನ ಅಗತ್ಯ’

ನಿವೃತ್ತ ಉಪನ್ಯಾಸಕ ವಿಶ್ವನಾಥ ಡೋಣೂರ ಅಭಿಮತ

​ಪ್ರಜಾವಾಣಿ ವಾರ್ತೆ
Published 14 ಜನವರಿ 2017, 11:34 IST
Last Updated 14 ಜನವರಿ 2017, 11:34 IST
ಜೇವರ್ಗಿ: ಸಾಹಿತ್ಯ ಅಧ್ಯಯನದಿಂದ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು, ಶರಣರು, ಸಂತರು, ದಾರ್ಶನಿಕರು ಹಾಗೂ ಸಮಾಜ ಸುಧಾರಕರ ಜೀವನ ಚರಿತ್ರೆ ಅಧ್ಯಯನ ಮಾಡುವುದು ಅವಶ್ಯಕ ಎಂದು  ನಿವೃತ್ತ ಕನ್ನಡ ಉಪನ್ಯಾಸಕ ವಿಶ್ವನಾಥ ಡೋಣೂರ ಹೇಳಿದರು. 
 
ಗುರುವಾರ ತಾಲ್ಲೂಕಿನ ಚನ್ನೂರ್ ಗ್ರಾಮದ ಆದರ್ಶ ವಿದ್ಯಾಲಯದಲ್ಲಿ ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋ ಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ‘ಯುವ ಜನತೆಗೆ ಸ್ವಾಮಿ ವಿವೇಕಾನಂದರ ಆದರ್ಶಗಳು’ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು. 
 
ಸಮಾಜದಲ್ಲಿ ಬೇರೂರಿದ್ದ ಮೂಢ ನಂಬಿಕೆ, ಕಂದಾಚಾರ ತೊಡೆದು ಹಾಕಲು 12ನೇ ಶತಮಾನದ ಬಸವಾದಿ ಶರಣರು ಜೀವನದುದ್ದಕ್ಕೂ ಹೋರಾಟ ನಡೆಸಿದ್ದಾರೆ. ಅವರಂತೆ ಸ್ವಾಮಿ ವಿವೇಕಾನಂದರು ಭಾರತ ದೇಶದ ಆಚಾರ,ವಿಚಾರ, ಪರಂಪರೆ ಹಾಗೂ ಸಂಸ್ಕೃತಿ ವಿಶ್ವಕ್ಕೆ ತಿಳಿಸಿದ ಮಹಾನ್ ಚೇತನ ಎಂದು ಅವರು ತಿಳಿಸಿದರು.
 
ಸ್ವಾಮಿ ವಿವೇಕಾನಂದರ ಜೀವನ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಡೋಣೂರ್ ತಿಳಿಸಿದರು.
 
ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ.ಎಲ್.ಗೋವಿಂದ ರಾಜ್ ಆಲ್ದಾಳ ಅವರು ‘ಸ್ವಾಮಿ ವಿವೇಕಾನಂದರ ಜೀವನ ಸಾಧನೆ’ ಕುರಿತು ಮಾತನಾಡಿದರು. 
 
ನಿವೃತ್ತ ಕನ್ನಡ ಉಪನ್ಯಾಸಕ ವಿಶ್ವನಾಥ ಡೋಣೂರ್ ಅವರ ‘ಕಾಯಕ ಪ್ರೇಮಿ ಸಿದ್ರಾಮಪ್ಪ’ ಹಾಗೂ ‘ಕಲ್ಯಾಣ ಪ್ರಣತೆ’ ಎರಡು ಕೃತಿಗಳನ್ನು ಪತ್ರಕರ್ತ ವೆಂಕಟೇಶ ಹರವಾಳಬಿಡುಗಡೆ ಮಾಡಿದರು. 
 
ಕನ್ನಡ ಉಪನ್ಯಾಸಕ ಆಜಪ್ಪ ಬಾಬು ಮತ್ತು ರಸಾಯನ ಶಾಸ್ತ್ರ ಉಪನ್ಯಾಸಕ ಸುರೇಶ ಕಾರ್ಯಕ್ರಮ ಕುರಿತು ಮಾತನಾಡಿದರು.
 
ಸಮಾಜಶಾಸ್ತ್ರ ಉಪನ್ಯಾಸಕ ಮಲ್ಲಯ್ಯ ಮಠಪತಿ ಅಧ್ಯಕ್ಷತೆ ವಹಿಸಿ, ಎನ್‌ಎಸ್‌ಎಸ್‌ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. 
 
ರಮೇಶ ಸರಿಕಾರ್, ಪರಮೇಶ್ವರ ಬಿರಾಳ(ಕೆ), ಮರೆಪ್ಪ ಬೇಗಾರ್, ಖಲೀಫ್ ಮಂದ್ರವಾಡ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
 
ವೈಶಾಲಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶ್ವೇತಾ ಸ್ವಾಗತಿಸಿದರು. ಶ್ರೀದೇವಿ ಕಲ್ಲಾ ನಿರೂಪಿಸಿದರು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.