ಸೋಮವಾರಪೇಟೆ: ‘ತಂಬಾಕು ಉತ್ಪನ್ನಗಳು ಆರೋಗ್ಯಕ್ಕೆ ಮಾರಕವಾಗಿದ್ದು, ನಿಯಮಗಳ ಮಿತಿಯಲ್ಲಿಯೇ ಮಾರಾಟ ಆಗುವಂತೆ ಅಧಿಕಾರಿಗಳೂ ಕ್ರಮವಹಿಸಬೇಕು’ ಬಗ್ಗೆ ತಂಬಾಕು ನಿಯಂತ್ರಣ ಉನ್ನತಾಧಿಕಾರ ಮಂಡಳಿಯ ನೋಡಲ್ ಅಧಿಕಾರಿ ಜಾನ್ ಕೆನಡಿ ಸೋಮವಾರ ಹೇಳಿದರು.
ಪತ್ರಿಕಾಭವನದಲ್ಲಿ ಪೊಲೀಸ್ ಇಲಾಖೆ ಸಹಕಾರದೊಂದಿಗೆ ನಡೆದ ಮಂಡಳಿ ಸಭೆಯಲ್ಲಿ ಅವರು ಮಾತನಾಡಿದರು.ತಂಬಾಕು ಸೇವನೆಯ ದುಷ್ಪರಿಣಾಮಗಳಿಂದ ಜನರ ರಕ್ಷಿಸಲು ಸರ್ಕಾರ ಕಠಿಣ ಕಾನೂನು ತಂದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಪ್ರದರ್ಶನ, 18 ವರ್ಷದೊಳಗಿನವರಿಗೆ ಉತ್ಪನ್ನ ಮಾರಾಟವೂ ಶಿಕ್ಷಾರ್ಹ ಅಪರಾಧ.
ಈ ಬಗ್ಗೆ ವ್ಯಾಪಾರಿಗಳಿಗೆ ಜಾಗೃತಿ ಮೂಡಿಸಲಾಗಿದೆ. ಬರುವ ದಿನಗಳಲ್ಲಿ ನಿಯಮ ಪಾಲಿಸದಿದ್ದರೆ ಸ್ಥಳದಲ್ಲೇ ದಂಡವಿಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಮೂರು ತಂಡಗಳನ್ನಾಗಿ ವಿಂಗಡಿಸಿ, ಪಟ್ಟಣದಲ್ಲಿ ಎರಡು ಮತ್ತು ಮಾದಾಪುರ ರಸ್ತೆಯಲ್ಲಿ ಇನ್ನೊಂದು ತಂಡ ಕಾರ್ಯಾಚರಣೆ ನಡೆಸಿ, ತಂಬಾಕು ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದ ಅಂಗಡಿ ಮಾಲೀಕರ ಜಾಗೃತಿ ಮೂಡಿಸಲು ಸೂಚಿಸಲಾಯಿತು.
ಕಾಯ್ದೆಯ ಪರಿಣಾಮಕಾರಿ ಜಾರಿಗೆ ಅಧಿಕಾರಿಗಳು ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆಯೂ ಮಾಹಿತಿ ನೀಡಲಾಯಿತು.ಜಿಲ್ಲಾ ಆರೋಗ್ಯ ಇಲಾಖೆ ಡಿಎಸ್ಒ ಶಿವರಾಂ, ವೃತ್ತನಿರೀಕ್ಷಕ ಪರಶಿವಮೂರ್ತಿ, ಸರ್ಕಾರಿ ಆಸ್ಪತ್ರೆಯ ಆರೋಗ್ಯಾಧಿಕಾರಿ ಆನಂದ್ ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.