ಗೋಣಿಕೊಪ್ಪಲು: ಮಣ್ಣಿನ ಸವೆತದಿಂದ ಮೂಲಸ್ವರೂಪ ಕಳೆದುಕೊಳ್ಳುತ್ತಿರುವ ಜಿಲ್ಲೆಯ ನದಿಪಾತ್ರದ ಸಂರಕ್ಷಣೆಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ 5 ವರ್ಷಗಳಲ್ಲಿ 3 ಲಕ್ಷ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಶಿಕ್ಷಕ ಸಮಿತಿ ಸಂಘಟಕ ಅಳಮೇಂಗಡ ಡಾನ್ ರಾಜಪ್ಪ ಹೇಳಿದರು.
ಜುಲೈ 9ರಂದು, ಗುರುಪೂರ್ಣಿಮೆ ಯಂದು ನಿಟ್ಟೂರು ಸಮೀಪದ ಲಕ್ಷ್ಮಣತೀರ್ಥ ನದಿ ದಂಡೆಯಲ್ಲಿ ಗಿಡ ನೆಡುವ ಮೂಲಕ ಈ ಮಹತ್ವದ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.
ನದಿ ದಂಡೆ ಮಣ್ಣು ಕುಸಿಯದಂತೆ ತಡೆಗಟ್ಟುವ ಬೇರುಗಳನ್ನು ಹೊಂದಿದ ಮರಗಳ ಸಸಿಗಳನ್ನು, ಜತೆಗೆ ಜಲಚರ, ಜೇನುನೊಣಕ್ಕೆ ಆಹಾರವಾಗುವ ಹೂ ಬಿಡುವ ಮರಗಳ ಸಸಿಗಳನ್ನು ನಡೆಲಾಗುವುದು.
ಸ್ಥಳೀಯರ ಮೂಲಕ ಅವುಗಳ ಸಂರಕ್ಷಣೆಗೆ ಒತ್ತು ನೀಡಲಾಗುವುದು. ಆರ್ಟ್್ ಆಫ್ ಲಿವಿಂಗ್ ಸಂಸ್ಥೆ ಇದಕ್ಕಾಗಿ ಸುಮಾರು ₹4 ರಿಂದ ₹5 ಲಕ್ಷ ಹಣ ವ್ಯಯಿಸುತ್ತಿದೆ. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ತಾಂತ್ರಿಕ ಸಲಹೆ ಹಾಗೂ ಗಿಡಗಳ ಉತ್ಪಾದನೆಯ ಸಹಕಾರದಲ್ಲಿ ಯೋಜನೆ ರೂಪುಗೊಳ್ಳುತ್ತಿದೆ ಎಂದು ಹೇಳಿದರು.
ಈಗಾಗಲೇ ಕೊಡಗು ವಲಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಾರುಲತಾ ಸೋಮಲ್, ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ರೊಂದಿಗೆ ಚರ್ಚಿಸಿ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಸಿಲ್ವಿಕಲ್ಚರ್ ವಿಭಾಗ ಮುಖ್ಯಸ್ಥ ಡಾ. ರಾಮಕೃಷ್ಣ ಹೆಗಡೆ ನದಿ ದಂಡೆಗಳು ಮಣ್ಣಿನ ಸವೆತದಿಂದ ತಮ್ಮ ಮೂಲ ಸ್ವರೂಪವನ್ನೇ ಕಳೆದು ಕೊಂಡಿವೆ. ಇದರಿಂದಾಗಿ ನದಿ ಪಾತ್ರವೇ ಬದಲಾಗಿದೆ. ಸಮೀಪದ ಜಾಗಗಳು ನದಿಯಾಗಿ ತಿರುವು ಪಡೆದುಕೊಂಡಿ ರುವುದು ದೊಡ್ಡ ಸಮಸ್ಯೆಯಾಗಿದೆ. ಇದನ್ನು ತಡೆಗಟ್ಟುವುದಕ್ಕೆ ಗಿಡ ಮರಗಳನ್ನು ಬೆಳೆಸುವುದು ಬಹಳ ಮುಖ್ಯ ಎಂದು ಹೇಳಿದರು.
ಕುರ್ಚಿ ಗ್ರಾಮದಿಂದ ನಾಲ್ಕೇರಿ, ಹರಿಹರ, ಕಾನೂರು, ನಿಟ್ಟೂರು, ಮಲ್ಲೂರು ಮೂಲಕ ಹರಿಯುವ ಲಕ್ಷ್ಮಣತೀರ್ಥ ನದಿಯ ದಂಡೆಯಲ್ಲಿ ಆರಂಭದ ಹಂತದ ಗಿಡಗಳನ್ನು ನೆಡಲಾಗುತ್ತಿದೆ ಎಂದು ಅವರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.