ಮುಳಬಾಗಿಲು: ತಾಲ್ಲೂಕಿನ ಕೆಲವು ಕಡೆ ಮಾವಿನ ತೋಟಗಳಲ್ಲಿ ಕಾಲಾವಧಿಗೆ ಮುಂಚಿತವಾಗಿಯೇ ಮಾವಿನ ಕಾಯಿ ಬಿಟ್ಟಿರುವುದರಿಂದ ಮಾವು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಡಿಸೆಂಬರ್– ಜನವರಿ ತಿಂಗಳಿನಲ್ಲಿ ಮಾವು ಹೂ ಬಿಡುವುದು ವಾಡಿಕೆ. ಆದರೆ, ಈ ವರ್ಷ ಮುಂಚಿತವಾಗಿಯೇ ಒಂದು ಕಡೆ ಹೂ ಕಂಡರೆ ಮತ್ತೆ ಅದೇ ಮರದಲ್ಲಿ ಮಾವಿನ ಕಾಯಿ ಬಿಟ್ಟಿದೆ. ಇದು ಮುಂದಿನ ಫಸಲಿಗೆ ತೊಂದರೆ ಆಗಬಹುದು ಎಂಬ ಭಯ ಮಾವು ಬೆಳೆಗಾರರಿಗೆ ಕಾಡುತ್ತಿದೆ ಎಂದು ಮಾವು ಬೆಳೆಗಾರ ಮಿಟ್ಟಹಳ್ಳಿ ಪ್ರಕಾಶ್ ಆತಂಕ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನಾದ್ಯಂತ ಮಾವಿನ ತೋಪುಗಳಲ್ಲಿ ಈ ಬಾರಿ ಹೂ ಚೆನ್ನಾಗಿ ಬಿಟ್ಟಿದೆ. ಹೂ ಬಿಡುವ ಮುನ್ನ ಮತ್ತು ಹೂ ಬಿಟ್ಟ ನಂತರ ಮಾವಿನ ಗಿಡ, ಮರಗಳಿಗೆ ಔಷಧಿಯನ್ನು ಸಿಂಪಡಿಸಲಾಗಿ. ಈ ವರ್ಷ ಫಸಲು ಚೆನ್ನಾಗಿರುವುದರಿಂದ ಹೆಚ್ಚಿನ ಆದಾಯ ಕೈ ಸೇರುವ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ.
ಮಾವಿನ ತೋಟದಲ್ಲಿ ಕಳೆ, ಗಿಡಗಂಟಿ, ಕಸ ತೆಗೆದು ಸ್ವಚ್ಛತೆ ಮಾಡಲಾಗಿದೆ. ಮರಗಳ ಬುಡದಲ್ಲಿ ನೀರು ಇಂಗುವ ಗುಂಡಿಗಳನ್ನು ಅಗೆದು ಗೊಬ್ಬರ ಔಷಧಿ ಸಿಂಪಡಿಸಲಾಗಿದೆ.
‘ಕೆಲವು ಮಾವಿನ ಮರಗಳಲ್ಲಿ ಅಕಾಲಿಕ ಫಸಲು ಬರುವ ಸಾಧ್ಯತೆಗಳು ಸಾಕಷ್ಟಿವೆ. ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ರೈತರು ಆತಂಕಕ್ಕೆ ಒಳಗಾಗಬೇಕಿಲ್ಲ’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಶಿವಕುಮಾರಿ ‘ಪ್ರಜಾವಾಣಿ’ಗೆ ತಿಳಿಸಿದರು.
ರೈತರು ಭಯ ಪಡಬೇಕಾಗಿಲ್ಲ
ತಾಲ್ಲೂಕಿನಲ್ಲಿ 13ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. 2016–17ನೇ ಸಾಲಿನಲ್ಲಿ ಮಾವು ಬೆಳೆ ರೈತರಿಗೆ ನರೇಗಾ ಯೋಜನೆಯಡಿಲ್ಲಿ 350 ಎಕರೆ ಪ್ರದೇಶದಲ್ಲಿ ಮಾವು
ಬೆಳೆಯಲು ಸಬ್ಸಿಡಿ ನೀಡಲಾಗಿದೆ. ಅಲ್ಲದೆ ಮಾವು ನಾಟಿ, ಬೆಳೆಯ ಪೂಷಣೆ, ಬಗ್ಗೆ ರೈತರಿಗೆ ಅರಿವು ಮೂಡಿಸಲಾಗಿದೆ. ಶಿವಕುಮಾರಿ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.