ADVERTISEMENT

ಅರಣ್ಯ ಭೂಮಿ ಒತ್ತುವರಿ ವಿವಾದ ಮರು ಸರ್ವೆಗೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2014, 5:16 IST
Last Updated 18 ಸೆಪ್ಟೆಂಬರ್ 2014, 5:16 IST

ಕೋಲಾರ: ಅರಣ್ಯ ಇಲಾಖೆಯ ಭೂಮಿ ಒತ್ತುವರಿ ವಿವಾದದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸರ್ವೆ ಮಾಡಬೇಕು. ಅದಕ್ಕಾಗಿ ಸಿದ್ಧತೆ ನಡೆಸಿ ಎಂದು ಭೂಮಾಪನ ಇಲಾಖೆ ಆಯುಕ್ತ ಋತ್ವಿಕ್‌ ರಂಜನ್‌ ಪಾಂಡೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಬುಧವಾರ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಶ್ರೀನಿವಾಸಪುರ ತಾಲ್ಲೂಕಿನ ಅಡ್ಡಗಲ್ ಗ್ರಾಮದ ವ್ಯಾಪ್ತಿಯ ಅರಣ್ಯ ಭೂಮಿಯ ಸರ್ವೆ ಕಾರ್ಯವನ್ನು ಮತ್ತೆ ನಡೆಸಬೇಕಾಗಿದೆ. ಅದಕ್ಕಾಗಿ ಅರಣ್ಯ ಇಲಾಖೆಯು ಎಲ್ಲ ಸಿದ್ಧತೆ ನಡೆಸಬೇಕು ಎಂದು ಆಯುಕ್ತರು ಸೂಚಿಸಿದರು.

ಅಡ್ಡಗಲ್ ಗ್ರಾಮದ ವ್ಯಾಪ್ತಿಯ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಶ್ರೀನಿವಾಸಪುರ ಶಾಸಕ ಕೆ.ಆರ್‌.­ರಮೇಶ್‌­ಕುಮಾರ್‌ ಸಮ್ಮುಖದಲ್ಲೇ ಕಳೆದ ವರ್ಷ ಅಕ್ಟೋಬರ್‌ 3ರಂದು ಸರ್ವೆ ನಡೆದಿತ್ತು.ಆಗ ಸರ್ವೆ ಮಾಪನದ ವಿಧಾನ ಕುರಿತು ಸಮರ್ಪಕ ದಾಖಲೆಗಳನ್ನು ಅರಣ್ಯ ಇಲಾಖೆಯು ಸಲ್ಲಿಸದ ಪರಿಣಾಮವಾಗಿ ಅಂದು ಸರ್ವೆ ನಡೆದಿರಲಿಲ್ಲ.

ಅರಣ್ಯ ಭೂಮಿಯ ಅಳತೆಗಾಗಿ 1944ರಲ್ಲಿ ಅಂದಿನ ಮಹಾರಾಜರ ಕಾಲದಲ್ಲಿ ಚೈನೇಜ್ ಅಳತೆ ಮಾಪನ ತಯಾರಿಸಲಾಗಿದ್ದು 20 ಮೀಟರ್ ಉದ್ದದ ಚೈನೇಜ್‌ನಲ್ಲಿ ಅಳತೆ ಮಾಡಲಾಗುವುದು ಎಂದು ಅಂದಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಮುನೇಗೌಡರ ಮಾತನ್ನು ರಮೇಶ್ ಕುಮಾರ್ ಅವರು ಒಪ್ಪಿರಲಿಲ್ಲ.

ಚೈನೇಜ್ ಅಳತೆ ಮಾಪನ ಈಗ ಅಪ್ರಸ್ತುತ. ಆಧುನಿಕತೆ ಬೆಳೆದಿರುವುದರಿಂದ ಈಗ ಟೇಪು ಮೂಲಕ ಅಳತೆ ಮಾಡಲಾಗುತ್ತಿದೆ. ಚೈನೇಜ್‌ನಲ್ಲಿ ನಿಖರವಾದ ಅಳತೆ ಮಾಪನವಿಲ್ಲ. ಟೇಪಿನಲ್ಲಿ ಎಲ್ಲ ರೀತಿಯ ಅಳತೆಗೋಲು ಇರುವುದರಿಂದ ಅದನ್ನೇ ಬಳಸಿ, ಸರ್ವೆ ಕಾರ್ಯ ನಡೆಸಿ ಎಂದು ಆಗ್ರಹಿಸಿದ್ದರು.

ಏನಿದು ವಿವಾದ? ಅರಣ್ಯ ಇಲಾಖೆಗೆ ಸೇರಿದ 2,405 ಎಕರೆ ಪ್ರದೇಶದಲ್ಲಿ ಶಾಸಕ ರಮೇಶ್ ಕುಮಾರ್ ಅವರು 64.24 ಎಕರೆ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂಬುದು ಅರಣ್ಯ ಇಲಾಖೆ ಆರೋಪ.  ನಿಯಮ ಪ್ರಕಾರವೇ ಬೇರೆಯವರಿಂದ ಭೂಮಿ ಖರೀದಿ ಮಾಡಿದ ದಾಖಲೆಗಳು ಇವೆ. ಹೀಗಾಗಿ ತಮ್ಮ ವಿರುದ್ಧ ಕ್ರಮಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT