ADVERTISEMENT

ಇತಿಹಾಸ ತಿಳಿಸಿಕೊಡುವ ಪಳೆಯುಳಿಕೆ ರಕ್ಷಿಸಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 7:26 IST
Last Updated 13 ಡಿಸೆಂಬರ್ 2017, 7:26 IST

ಮುಳಬಾಗಿಲು: ‘ಹಿಂದಿನ ಕಾಲದ ಇತಿಹಾಸ ತಿಳಿಸಿಕೊಡುವ ಪಳೆಯುಳಿಕೆಗಳನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬರೂ ಮುಂದಾಗಬೇಕು’ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ತಿಳಿಸಿದರು.

ತಾಲ್ಲೂಕಿನ ಉತ್ತನೂರು ಗ್ರಾಮದ ವರದರಾಜಸ್ವಾಮಿ ದೇವಾಲಯದಲ್ಲಿ ಇತ್ತೀಚೆಗೆ ವರದರಾಜಸ್ವಾಮಿ ದೇವರಿಗೆ ಬಂಗಾರದ ಕಿರೀಟ ಮತ್ತು ವಿವಿಧ ಬಗೆಯ ಒಡವೆಗಳನ್ನು ಉಡುಗೊರೆಯಾಗಿ ನೀಡಿ ಮಾತನಾಡಿದರು.

ನಮಗೆ ನಮ್ಮ ಪೂರ್ವಿಕರು ಬಿಟ್ಟು ಹೋದ ಕೆಲ ವಸ್ತುಗಳಲ್ಲಿ ಅವರನ್ನು ಕಾಣಬಹುದು. ಆ ಕಾರಣದಿಂದ ನಮ್ಮ ಹಿರಿಯರು ಉಳಿಸಿದ ಹಳೆ ಕಾಲದ ಕಟ್ಟಡ, ಕೋಟೆ, ಗೋಡೆ ಹಾಗೂ ದೇವಾಲಯ ಸೇರಿದಂತೆ ವಿವಿಧ ಬಗೆಯ ಪಳೆಯುಳಿಕೆ ಪೋಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದು ಹೇಳಿದರು.

ADVERTISEMENT

ತಾಲ್ಲೂಕು ಐತಿಹಾಸಿಕ, ಚಾರಿತ್ರಿಕತೆ ಹೊಂದಿದ್ದು, ರಾಜ ಮಹಾರಾಜರ ಕಾಲದಲ್ಲಿ ಪ್ರಸಿದ್ಧ ದೇವಾಲಯ, ಗುಡಿ ಗೋಪುಗಳು ನಿರ್ಮಾಣವಾಗಿವೆ. ಇವೆಲ್ಲವನ್ನೂ ಉಳಿಸಿ ಬೆಳೆಸಿ ಪೋಷಿಸಲು ನಾವೆಲ್ಲರೂ ಹೆಚ್ಚಿನ ಆಸಕ್ತಿ ವಹಿಸಬೇಕಾಗಿದೆ. ಆಗ ಮಾತ್ರ ಮುಂದಿನ ತಲೆಮಾರಿನ ಜನಾಂಗಕ್ಕೆ ಇತಿಹಾಸದ ಪಳೆಯುಳಿಕೆ ಪರಿಚಯಿಸಿ ಕೊಡಲು ಸಾಧ್ಯವಾಗುತ್ತದೆ ಎಂದರು.

ತಾಲ್ಲೂಕಿನ ಆವಣಿ ರಾಮಲಿಂಗೇಶ್ವರ, ವಿರೂಪಾಕ್ಷಿ ವಿರೂಪಾಕ್ಷೇಶ್ವರ, ಕುರುಡುಮಲೆ ವಿನಾಯಕ, ಮುಳಬಾಗಿಲಿನ ಆಂಜನೇಯಸ್ವಾಮಿ, ವಿಠಲನಾರಾಯಣಸ್ವಾಮಿ, ನರಸಿಂಹತೀರ್ಥ ಸೇರಿದಂತೆ ಹಲವಾರು ದೇವಾಲಯಗಳು ಪ್ರವಾಸಿ ತಾಣಗಳಾಗಿವೆ. ಇವೆಲ್ಲಕ್ಕೂ ಮೂಲ ಸೌಲಭ್ಯ ಒದಗಿಸಿಕೊಟ್ಟು ದೂರದಿಂದ ಬಂದು ಹೋಗುವ ಪ್ರವಾಸಿಗರಿಗೆ ಮುಂದಿನ ದಿನಗಳಲ್ಲಿ ಅನುಕೂಲಕರ ವಾತಾವರಣ ನಿಮಾರ್ಣ ಮಾಡಿ ಕೊಡಲಾಗುವುದು ಎಂದು ತಿಳಿಸಿದರು.

ವರದರಾಜಸ್ವಾಮಿ ದೇವರ ವಿಗ್ರಹಕ್ಕೆ ಶಾಸಕ ಕೊತ್ತೂರು ಜಿ.ಮಂಜುನಾಥ್ ಹಾಗೂ ಕುಟುಂಬಸ್ಥರು ಬಂಗಾರದ ಕಿರೀಟ, ಬೆಳ್ಳಿಯ ಕವಚಗಳು ಸೇರಿದಂತೆ ₹ 60ಲಕ್ಷ ವೆಚ್ಚದ ಒಡವೆ ವಸ್ತುಗಳನ್ನು ಉಡುಗೊರೆಯಾಗಿ ನೀಡಿದರು. ದೇವಾಲಯದ ಸಂಪ್ರದಾಯದ ಪ್ರಕಾರ ದೇವರ ಒಡವೆಗಳನ್ನು ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿ ತರಲಾಯಿತು. ಬೆಳಿಗ್ಗೆಯಿಂದ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿತ್ತು.

ಶಾಸಕ ಕೊತ್ತೂರು ಜಿ.ಮಂಜುನಾಥ್ ಸಹೋದರ ಜಿ.ವೆಂಕಟರವಣ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಉತ್ತನೂರು ಅರವಿಂದ್, ಪ್ರಕಾಶ್ ರಾಮಚಂದ್ರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ, ಸದಸ್ಯ ಆವಣಿ ರವಿಶಂಕರ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಗಂಗಿರೆಡ್ಡಿ, ಮಾಜಿ ಅಧ್ಯಕ್ಷ ಉತ್ತನೂರು ಶ್ರೀನಿವಾಸ್, ಕೋಚಿಮುಲ್ ನಿರ್ದೇಶಕ ಆರ್.ಆರ್.ರಾಜೇಂದ್ರಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಎಪಿಎಂಸಿ ಅಧ್ಯಕ್ಷ ರಘುಪತಿ, ನಗರಸಭೆ ಸದಸ್ಯ ಜಗನ್‍ ಮೋಹನ್‍ ರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.