ADVERTISEMENT

ಜಕಣಾಚಾರ್ಯರು ಕಾಲ್ಪನಿಕ ಅಲ್ಲ

​ಪ್ರಜಾವಾಣಿ ವಾರ್ತೆ
Published 3 ಜನವರಿ 2017, 7:31 IST
Last Updated 3 ಜನವರಿ 2017, 7:31 IST

ಕೋಲಾರ: ತಾಲ್ಲೂಕಿನ ತ್ಯಾವನಹಳ್ಳಿಯಲ್ಲಿ ಭಾನುವಾರ ಜಿಲ್ಲಾ ವಿಶ್ವಕರ್ಮ ಸಮಾಜದ ವತಿಯಿಂದ ಅಮರ ಶಿಲ್ಪಿ ಜಕಣಾಚಾರ್ಯರ ಸಂಸ್ಮರಣಾ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವಕರ್ಮ ಸಮಾಜ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಕೆ.ವಿ.ಜಗದೀಶ್ವರಾಚಾರಿ, ‘ಕೆಲ ಆಧ್ಯಾತ್ಮಿಕ ಚಿಂತಕರು ಅಮರ ಶಿಲ್ಪಿ ಜಕಣಾಚಾರ್ಯರು ಕಾಲ್ಪನಿಕವೆಂದು ಬಿಂಬಿಸಿದ್ದಾರೆ. ಆದರೆ, ಇದು ಸತ್ಯವಲ್ಲ’ ಎಂದು ಹೇಳಿದರು.

600ಕ್ಕೂ ಹೆಚ್ಚು ದೇವಾಲಯಗಳಲ್ಲಿ ಜಕಣಾಚಾರ್ಯರ ಕೆತ್ತನೆಗಳಿವೆ. ಬೇಲೂರು, ಹಳೇಬೀಡು, ಕೈದಾಳ, ಸೋಮನಾಥಪುರ ದೇವಾಲಯಗಳಲ್ಲಿನ ಶಿಲ್ಪಕಲೆಯು ಜಕಣಾಚಾರ್ಯರ ಪ್ರತಿಭೆಯನ್ನು ಸಾಕ್ಷಿಕರಿಸುತ್ತವೆ. ಅವರು ಶಿಲ್ಪಕಲೆಯ ಜತೆಗೆ ವೇದ, ಉಪನಿಷತ್ತು, ಪುರಾಣ, ಶಿಲ್ಪಶಾಸ್ತ್ರದಲ್ಲಿ ಪರಿಣತಿ ಹೊಂದಿದ್ದರು ಎಂದರು.

‘ಜಕಣಾಚಾರ್ಯರು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಅನೇಕ ದೇವಾಲಯಗಳನ್ನು ನಿರ್ಮಿಸಿ ಖ್ಯಾತಿ ಗಳಿಸಿದರು. ಅವರು ವಿಶ್ವ ವಿಖ್ಯಾತ ದೇವಾಲಯಗಳನ್ನು ನಿರ್ಮಿಸಿದರೂ ಎಲ್ಲಿಯೂ ತಮ್ಮ ಹೆಸರು ಕೆತ್ತಿಲ್ಲ. ಅವರ ಶಿಲ್ಪಕಲೆಯು ಎಂದೆಂದಿಗೂ ಅಮರ’ ಎಂದು ಶಿಲ್ಪಿ ಕೆ.ವೆಂಕಟಸಾಮಾಚಾರ್ಯ ಅಭಿಪ್ರಾಯಪಟ್ಟರು.

ಜಿಲ್ಲಾ ವಿಶ್ವಕರ್ಮ ಸಮಾಜದ ಮುಖಂಡರಾದ ಎ.ರುದ್ರಪ್ಪ, ಎಸ್.ಹನುಮಂತಾಚಾರ್, ಪುಟ್ಟಸ್ವಾಮಾಚಾರ್, ವಿ.ಶಂಕರಾಚಾರ್, ವೆಂಕಟಾಚಾರ್, ಸರ್ವಜ್ಞಮೂರ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.