ADVERTISEMENT

ಜಿಲ್ಲೆಯಲ್ಲಿ ಚೈತನ್ಯಶೀಲ ಮನಸ್ಸುಗಳ ಹುಟ್ಟು

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 5:10 IST
Last Updated 18 ಜನವರಿ 2017, 5:10 IST
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೋಲಾರದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಹಿತಿ ಚಂದ್ರಶೇಖರ್‌ ನಂಗಲಿ ಅವರ ಬದುಕು–ಬರಹ ಕುರಿತ ವಿಚಾರಗೋಷ್ಠಿ ಹಾಗೂ ಸಂವಾದದ ಸಮಾರೋಪ ಸಮಾರಂಭದಲ್ಲಿ ಚಿಂತಕ ನಟರಾಜ್ ಬೂದಾಳ್‌ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೋಲಾರದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಹಿತಿ ಚಂದ್ರಶೇಖರ್‌ ನಂಗಲಿ ಅವರ ಬದುಕು–ಬರಹ ಕುರಿತ ವಿಚಾರಗೋಷ್ಠಿ ಹಾಗೂ ಸಂವಾದದ ಸಮಾರೋಪ ಸಮಾರಂಭದಲ್ಲಿ ಚಿಂತಕ ನಟರಾಜ್ ಬೂದಾಳ್‌ ಮಾತನಾಡಿದರು.   

ಕೋಲಾರ: ‘ಜಿಲ್ಲೆಯಲ್ಲಿ ಚೈತನ್ಯಶೀಲ ಮನಸ್ಸುಗಳು ಮತ್ತು ಅದ್ಭುತ ಪ್ರತಿಭೆಗಳು ಹುಟ್ಟುತ್ತಿವೆ’ ಎಂದು ಎಂದು ಚಿಂತಕ ನಟರಾಜ್ ಬೂದಾಳ್‌ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಹಿತಿ ಚಂದ್ರಶೇಖರ್‌ ನಂಗಲಿ ಅವರ ಬದುಕು–ಬರಹ ಕುರಿತ ವಿಚಾರಗೋಷ್ಠಿ ಹಾಗೂ ಸಂವಾದದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಚಂದ್ರಶೇಖರ್‌ ಅಧ್ಯಾಪಕ ವೃತ್ತಿಯ ಜತೆಗೆ ವಿಮರ್ಶೆಯ ಮೂಲಕ ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದರು.

ಸಮಾಜಕ್ಕೆ ಪೂರಕವಾದ ಸಾಹಿತ್ಯ, ಕಲೆ, ಸಂಸ್ಕೃತಿಯ ಪುಸ್ತಕಗಳನ್ನು ರಚಿಸುತ್ತಿರುವ ಚಂದ್ರಶೇಖರ್‌ರ ಸಾಹಿತ್ಯ ಕೃಷಿ ನಿಜಕ್ಕೂ ಶ್ಲಾಘನೀಯ. ಈ ನೆಲಕ್ಕೆ ಏನಾದರೂ ಹೊಸದನ್ನು ಕೊಡುವ ಚೈತನ್ಯ ಚಂದ್ರಶೇಖರ್‌ ಅವರಲ್ಲಿದೆ. ಅವರು ಇಂದಿನ ಮಠ ಸಮುದಾಯದ ಪರಂಪರೆ ನಡುವೆ ಕೈಯಲ್ಲಿ ಹಣತೆ ಹಿಡಿದು ಬೆಳಕಿನ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.

ಓದನ್ನು ಪ್ರಕ್ರಿಯೆಯಾಗಿಸಿಕೊಂಡು ಹೇಗೆ ಓದುತ್ತಿದ್ದೇವೆ ಎಂಬುದು ಮುಖ್ಯ. ಸಿದ್ಧ ಪುಸ್ತಕಗಳನ್ನು ಓದುವುದರಲ್ಲಿ ಅರ್ಥವಿಲ್ಲ. ಪಠ್ಯ ಎಂಬುದು ಸಿದ್ಧವಾಗಿರುವುದಿಲ್ಲ. ಅದನ್ನು ಓದಿ ವಿಚಾರಗಳನ್ನು ಮೈಗೂಡಿಸಿಕೊಂಡಾಗ ಓದು ಪರಿಪೂರ್ಣವಾಗುತ್ತದೆ. ಬಹುಪಾಲು ಮಂದಿ ತಾವೇ ರಚಿಸಿದ ಪ್ರತಿಬಿಂಬಗಳಿಗೆ, ತತ್ವಗಳಿಗೆ ಬಂಧನವಾಗುತ್ತಿದ್ದಾರೆ. ಇದು ಅವರಿಗೆ ಅರಿವಿಲ್ಲ. ಕವಿ, ದಾರ್ಶನಿಕ ಮತ್ತು ವಿಮರ್ಶಕರಿಗೆ ನಡುವಿನ ವ್ಯತ್ಯಾಸ ಬಹಳ ದೊಡ್ಡದು. ಚಂದ್ರಶೇಖರ್‌ ಕ್ರಿಯಾಶೀಲ ವಿಮರ್ಷಕ ಎಂದು ತಿಳಿಸಿದರು.

ಸಾಹಿತಿ ಲಕ್ಷ್ಮಿಪತಿ ಕೋಲಾರ ಮಾತನಾಡಿ, ‘ಚಂದ್ರಶೇಖರ್‌ ನಿವೃತ್ತಿ ನಂತರ ಕಾಡಿನ ಆದಿವಾಸಿ ಜನರ ಜತೆ ಜೀವನ ನಡೆಸಲು ನಿರ್ಧರಿಸಿರುವುದು ಸಂತಸದ ವಿಷಯ. ಇತ್ತೀಚಿನ ದಿನಗಳಲ್ಲಿ ಅನರ್ಹರನ್ನು ಸನ್ಮಾನಿಸಲಾಗುತ್ತಿದೆ. ತಾನು ಏನು ಸಾಧನೆ ಮಾಡಿ ಸನ್ಮಾನಿತನಾಗುತ್ತಿದ್ದೇನೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.

ಆಹಾರ ಮತ್ತು ಬದುಕಿನ ಪದ್ಧತಿಯಿಂದ ಜನ ಇಕ್ಕಟ್ಟಿಗೆ ಸಿಲುಕಿದ್ದಾರೆ. ಇದು ತಮ್ಮಷ್ಟಕ್ಕೇ ತಾವೇ ತಂದುಕೊಂಡ ಸಮಸ್ಯೆ. ಇದನ್ನು ಬಗೆಹರಿಸಿಕೊಳ್ಳುವ ಶಕ್ತಿ ಮನುಷ್ಯರಲ್ಲಿ ಇದೆ. ಆದರೆ, ಆ ಶಕ್ತಿ ಬಳಸಿಕೊಳ್ಳದೆ ಇಕ್ಕಟ್ಟಿನಲ್ಲೇ ಬದುಕುತ್ತಿರುವುದು ವಿಷಾದನೀಯ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.