ADVERTISEMENT

ಅತಂತ್ರ ಸ್ಥಿತಿಯಲ್ಲಿ ಬದುಕು: ಗೋಳು ಕೇಳೋರಿಲ್ಲ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 8:38 IST
Last Updated 7 ನವೆಂಬರ್ 2017, 8:38 IST

ಕುಷ್ಟಗಿ: ಪಟ್ಟಣದ ಹೊರವಲಯದ ಕಂದಕೂರು ರಸ್ತೆಯಲ್ಲಿ ಗೃಹಮಂಡಳಿಗೆ ಸೇರಿದ ಮಾರುತಿ ನಗರದಲ್ಲಿ ಸುಮಾರು 300 ಕುಟುಂಬಗಳು ವಾಸಿಸುತ್ತಿದ್ದು ಎರಡು ದಶಕಗಳಿಂದ ಹೋರಾಟ ನಡೆಸುತ್ತಾ ಬಂದರೂ ಮನೆಗಳ ಹಕ್ಕುಪತ್ರ ದೊರೆತಿಲ್ಲ. ಇತ್ತ ಆ ಪ್ರದೇಶ ಪುರಸಭೆಗೆ ಬಡಾವಣೆ ಹಸ್ತಾಂತರಗೊಳ್ಳದ ಕಾರಣ ಅಲ್ಲಿಯ ಜನರು ಅತಂತ್ರ, ಅನಾಥ ಪ್ರಜ್ಞೆಯಲ್ಲಿಯೇ ಬದುಕುವಂತಾಗಿದೆ.

‘ಎರಡು ದಶಕಗಳ ಹಿಂದೆ ಗೃಹಮಂಡಳಿ ಕೊಳಚೆ ಪ್ರದೇಶದ ನಿವಾಸಿಗಳ ಸಲುವಾಗಿ 200 ಮನೆಗಳನ್ನು ನಿರ್ಮಿಸಿತ್ತು. ಆದರೆ, ಆ ಮನೆಗಳಲ್ಲಿ ಪ್ರಾರಂಭದಲ್ಲಿ ವಾಸಿಸಲು ಜನರು ಹಿಂಜರಿದ ಕಾರಣ ಗೃಹಮಂಡಳಿ ₹6 ಸಾವಿರ ಪಾವತಿಸಿದ ಯಾರೇ ಆಗಲಿ ಅವರಿಗೆ ಮನೆಗಳನ್ನು ಬಿಟ್ಟುಕೊಟ್ಟಿತ್ತು. ಬಡವರ ಹೆಸರಿನಲ್ಲಿ ಅನೇಕ ಪ್ರಭಾವಿಗಳು ಅಲ್ಲಿ ಮನೆ ಮತ್ತು ನಿವೇಶನಗಳನ್ನು ಗಿಟ್ಟಿಸಿಕೊಂಡು ನಂತರ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಮನೆಯ ಅಗತ್ಯ ಇಲ್ಲದ ಇನ್ನೂ ಕೆಲವರು ಬಾಡಿಗೆ ಕೊಟ್ಟು ಹೋಗಿದ್ದಾರೆ’ ಎಂಬ ಆರೋಪವಿದೆ.

‘ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ಇದೆ. ಆದರೆ, ಜೆಸ್ಕಾಂ ದಾಖಲೆಗಳಲ್ಲಿ ಗೃಹಮಂಡಳಿ ಎಂಜಿನಿಯರ್ ಹೆಸರಿನಲ್ಲಿರುವುದರಿಂದ ಎಂಜಿನಿಯರ್ ಹೆಸರಿನಲ್ಲಿಯೇ ಜನರು ತಮ್ಮ ಮನೆಗಳ ವಿದ್ಯುತ್ ಬಿಲ್ ಪಾವತಿಸುತ್ತಿದ್ದಾರೆ. ಆದರೆ ಮನೆಗಳಲ್ಲಿ ತಾವು ವಾಸಿಸುವ ಮೊದಲೇ ಸಾವಿರಾರು ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿದಿದ್ದರೂ ಅದನ್ನೂ ಪಾವತಿಸುವಂತೆ ಜೆಸ್ಕಾಂ ತಾಕೀತು ಮಾಡುತ್ತಿದೆ. ಅಷ್ಟೊಂದು ಹಣ ಪಾವತಿಸುವ ಶಕ್ತಿ ನಮಗೆ ಇಲ್ಲ’ ಎಂದು ಜನರು ತಿಳಿಸಿದರು.

ADVERTISEMENT

ಬಾಯಿಮಾತಿನ ಭರವಸೆ: ‘ಮನೆಗಳ ಮಾಲೀಕತ್ವವೇ ಇಲ್ಲದ ಕಾರಣ ಸರ್ಕಾರದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಗೃಹಮಂಡಳಿಯಿಂದ ಹಕ್ಕುಪತ್ರಗಳನ್ನು ಕೊಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾಯಿತು. ಅನೇಕ ಬಾರಿ ಪ್ರತಿಭಟನೆ, ಧರಣಿ, ಉಪವಾಸ ಸತ್ಯಾಗ್ರಹವನ್ನೂ ನಡೆಸಿದೆವು. ಆದರೆ ಹಾಲಿ ಮಾಜಿ ಶಾಸಕರು, ಅಧಿಕಾರಿಗಳಿಂದ ಕೇವಲ ಬಾಯಿ ಮಾತಿನ ಭರವಸೆ ಬಿಟ್ಟರೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಲ್ಲ’ ಎಂದು ಬುಡನ್‍ಸಾಬ್ ಗೌಡರ್, ರೇಣುಕಮ್ಮ, ಲಕ್ಷ್ಮವ್ವ ಆಕ್ರೋಶ ವ್ಯಕ್ತಪಡಿಸಿದರು.

ಬಯಲಲ್ಲೇ ಶೌಚ: ಇಲ್ಲಿ ಕೆಲವೇ ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿವೆ. ಬಹುತೇಕ ಜನ ಬಡವರಿದ್ದು, ಮನೆ ಅಥವಾ ನಿವೇಶನಗಳ ಹಕ್ಕುಪತ್ರ ಇಲ್ಲದ ಕಾರಣ ಸ್ವಚ್ಛ ಭಾರತ ಅಭಿಯಾನದಲ್ಲಿ ಸಹಾಯಧನ ದೊರೆಯುತ್ತಿಲ್ಲ. ಹಾಗಾಗಿ ಬಹಳಷ್ಟು ಜನರಿಗೆ ಸುತ್ತಲಿನ ಬಯಲು ಹೊಲಗದ್ದೆಗಳೇ ಬಹಿರ್ದೆಸೆ ತಾಣಗಳಾಗಿವೆ.

‘ಮಹಿಳೆಯರಿಗಾಗಿಯೇ 10 ಕೊಠಡಿಗಳಿರುವ ಸಾಮೂಹಿಕ ಶೌಚಾಲಯ ಇದ್ದರೂ ನಿರ್ವಹಣೆ ಇಲ್ಲದೆ ಹಾಳುಬಿದ್ದು ಗಿಡಗಂಟೆಗಳು ಆವರಿಸಿ ಹಾವು, ಚೇಳು ಮನೆ ಮಾಡಿವೆ. ಹಾಗಾಗಿ ಮಹಿಳೆಯರು ಪುರುಷರು ಒಂದೇ ಕಡೆ ಬಹಿರ್ದೆಸೆಗೆ ತೆರಳುವ ದಯನೀಯ ಸ್ಥಿತಿ ಅನುಭವಿಸುವಂತಾಗಿದೆ’ ಎಂದು ಶರಣಮ್ಮ, ಲಕ್ಷ್ಮವ್ವ ಬೋಂದಾಳೆ, ಮಂಜಮ್ಮ ಸಮಸ್ಯೆ ವಿವರಿಸಿದರು.

‘ಗೃಹಮಂಡಳಿ ಜಾಗದಲ್ಲಿ ತಾತ್ಕಾಲಿಕ ಮಸೀದಿ ತಲೆಎತ್ತಿದ್ದು ಸಂಜೆ ಮತ್ತು ಬೆಳಗಿನ ಜಾವ ಅದರ ಸುತ್ತಲೂ ಪ್ರಖರ ಬೆಳಕಿನ ವ್ಯವಸ್ಥೆ ಮಾಡಿರುತ್ತಾರೆ. ಆ ಸಮಯದಲ್ಲಿ ಮಹಿಳೆಯರು ಬಹಿರ್ದೆಸೆಗೆ ಹೋಗದಂತಾಗಿದೆ’ ಎಂದು ಇನ್ನೂ ಕೆಲವರು ಅಳಲು ತೋಡಿಕೊಂಡರು. ‘ಸಾಮೂಹಿಕ ಶೌಚಾಲಯಕ್ಕೆ ನೀರಿನ ಕೊರತೆ ಇದೆ. ಸ್ವಚ್ಛಭಾರತ ಅಭಿಯಾನದಲ್ಲಿ ವೈಯಕ್ತಿಕ ಶೌಚಾಲಯಕ್ಕೆ ಸಹಾಯಧನ ಕಲ್ಪಿಸಲು ಸಾಧ್ಯವೆ? ಎಂಬುದನ್ನು ಪರಿಶೀಲಿಸುತ್ತೇನೆ’ ಎಂದು ಪುರಸಭೆ ಮುಖ್ಯಾಧಿಕಾರಿ ಸತೀಶ ಚವಡಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.