ADVERTISEMENT

ಬರ ಎದುರಿಸಲು ಸಿದ್ಧತೆ

ನೀರು ಲಭ್ಯತೆ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2017, 9:29 IST
Last Updated 24 ಜನವರಿ 2017, 9:29 IST
ಬರ ಎದುರಿಸಲು ಸಿದ್ಧತೆ
ಬರ ಎದುರಿಸಲು ಸಿದ್ಧತೆ   

ಗಂಗಾವತಿ: ರಾಜ್ಯದ 176 ತಾಲ್ಲೂಕಿನ ಪೈಕಿ 160 ತಾಲ್ಲೂಕು ಬರಪೀಡಿತ ಎಂದು ಘೋಷಣೆಯಾಗಿದೆ. ಬರಸ್ಥಿತಿಯನ್ನು ಎದುರಿಸಲು ಕೊಪ್ಪಳ ಜಿಲ್ಲೆಯಲ್ಲಿ ವೈಜ್ಞಾನಿಕವಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ತಾಲ್ಲೂಕಿನ ವೆಂಕಟಗಿರಿಯಲ್ಲಿ ಗೋಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಿ ಸಕಲ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಿಸಲಾಗಿದೆ ಎಂದರು.

ಮಳೆ ಪ್ರಮಾಣ ಕಡಿಮೆಯಾಗಿರುವ ಕಾರಣ ಮುಂದಿನ ಐದು ತಿಂಗಳ ಕಾಲ ಕುಡಿಯುವ ನೀರನ್ನು ಒದಗಿಸಬೇಕಾದ ಸವಾಲಿದೆ. ಪ್ರತಿ ಗ್ರಾಮದಲ್ಲಿರುವ ನೀರಿನ ಮೂಲ, ಪರ್ಯಾಯ ವ್ಯವಸ್ಥೆ ಸಾಧ್ಯತೆಗಳನ್ನು ಸಮೀಕ್ಷೆ ಮಾಡಲಾಗಿದೆ. ಪ್ರತಿ ವ್ಯಕ್ತಿಗೆ ದಿನಕ್ಕೆ 80 ಲೀಟರ್ ದೊರೆಯುವಂತೆ ಮಾಡಲಾಗುವುದು. ಗ್ರಾಮದಲ್ಲಿ ನೀರು ದೊರೆಯದಿದ್ದರೆ ವಾಹನದ ಮೂಲಕ ವ್ಯವಸ್ಥೆ ಮಾಡಲಾಗುವುದು ಎಂದರು.

₹125 ಕೋಟಿ ಹಿಂಗಾರು ಬೆಳೆ ಹಾನಿ ಹಾಗೂ ₹60 ಕೋಟಿ ಮುಂಗಾರು ಬೆಳೆ ಹಾನಿಯಾಗಿದೆ. ಜಿಲ್ಲೆಗೆ ಒಟ್ಟು ₹181 ಕೋಟಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ರೈತರ ಬ್ಯಾಂಕ್  ಖಾತೆಗೆ ನೇರವಾಗಿ ಹಣ ಹಾಕಲಾಗುವುದು ಎಂದರು.

ಜಿಲ್ಲೆಯಲ್ಲಿ ಈಗ ಐದು ಗೋಶಾಲೆ ತೆರೆಯಲಾಗಿದೆ. ಮುಂದೆ ಅಗತ್ಯ ಬಿದ್ದರೆ ಮತ್ತೆ ಐದು ಗೋಶಾಲೆ ತೆರಯಲಾಗುವುದು. ಜನ ಜಾನುವಾರುಗಳಿಗೆ ಕುಡಿಯುವ ನೀರು, ಆಹಾರ, ಉದ್ಯೋಗಕ್ಕೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗಿದೆ ಎಂದರು.

ಜಿಲ್ಲಾಧಿಕಾರಿ ಕನಗವಲ್ಲಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮವ್ವ ನಿರ್ಲೂಟಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜ, ತಹಶೀಲ್ದಾರ್ ಚಂದ್ರಕಾಂತ್, ಡಿವೈಎಸ್ಪಿ ಎಸ್.ಎಂ.ಸಂಧಿಗವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.