ಹನುಮಸಾಗರ: ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಬೇಕಾಗಿದ್ದ 21ನೇ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಮುಂದೂಡಿದ್ದರಿಂದ ಚಿಕಿತ್ಸೆಗೆಂದು ಬಂದಿದ್ದ ನೂರಾರು ಜನ ಪರದಾಡಿದ ಘಟನೆ ಹನುಮಸಾಗರದಲ್ಲಿ ಶುಕ್ರವಾರ ನಡೆದಿದೆ.
ಇಲ್ಲಿಯ ಅಭ್ಯುದಯ ವಿವಿಧೋದ್ದೇಶಗಳ ಅಭಿವೃದ್ಧಿ ಸೇವಾ ಸಂಸ್ಥೆ, ಗಜಾನನ ಸಂಸ್ಥೆ, ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅಂಧತ್ವ ವಿಭಾಗ, ರಾಮಚಂದ್ರನ್ ಟ್ರಸ್ಟ್ ಬೆಂಗಳೂರು ಆಶ್ರಯದಲ್ಲಿ ಇಲ್ಲಿನ ವಿವೇಕ ಶ್ರೀನಿವಾಸ ಕಣ್ಣಾಸ್ಪತ್ರೆಯಲ್ಲಿ ನ.17 ಮತ್ತು ನ.18ರಂದು ಉಚಿತ ನೇತ್ರ ಶಸ್ತ್ರ
ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಹಳ್ಳಿಗಳಲ್ಲಿ ಸಾಕಷ್ಟು ಪ್ರಚಾರವನ್ನೂ ಮಾಡಿದ್ದರಿಂದ ಶಿಬಿರಕ್ಕೆ ಸುಮಾರು 250 ಕ್ಕೂ ಹೆಚ್ಚು ರೋಗಿಗಳು ಆಗಮಿಸಿದ್ದರು. ಶುಕ್ರವಾರ ಶಸ್ತ್ರ ಚಿಕಿತ್ಸೆ ಮಾಡಬೇಕಾದ ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡಿರುವ ಕಾರಣ ಮುಷ್ಕರ ಮುಗಿಯುವವರೆಗೂ ಬರುವುದಿಲ್ಲ ಎಂದು ಸಂಘಟಕರಿಗೆ ತಿಳಿಸಿದ ಕಾರಣ ದೂರದ ಊರುಗಳಿಂದ ಶಸ್ತ್ರ ಚಿಕಿತ್ಸೆಗೆಂದು ಬಂದಿದ್ದ ಜನರಿಗೆ ನಿರಾಸೆಗೊಂಡರು.
ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ವೈದ್ಯರ ಮುಷ್ಕರ ಅಂತ್ಯಗೊಂಡ ಮಾಹಿತಿ ತಿಳಿದ ಬಳಿಕ ಸಂಘಟಕರು ವೈದ್ಯರನ್ನು ಸಂಪರ್ಕಿಸಿ ನಾಳೆ ಶಸ್ತ್ರ ಚಿಕಿತ್ಸೆ ನಡೆಸುವ ಬಗ್ಗೆ ದೃಢೀಕರಿಸಿಕೊಂಡರು.
ಶಸ್ತ್ರಚಿಕಿತ್ಸೆ ಗೊಳಪಡುವವರಿಗೆ ಶುಕ್ರವಾರ ಬಿಪಿ, ಮಧುಮೇಹ ಮತ್ತಿತರ ತಪಾಸಣೆ ಮಾಡಲಾಗಿದೆ ಎಂದು ಅಭ್ಯುದಯ ಸಂಸ್ಥೆಯ ಅಂಬಾಸಾ ರಾಯಬಾಗಿ, ಜಯಪ್ರಕಾಶ ಕಾಟವಾ, ಖಾಜೇಸಾಬ ಮುದಗಲ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.