ಗಂಗಾವತಿ: ತಾಲ್ಲೂಕಿನ ಹೆಬ್ಬಾಳ ಗ್ರಾಮದಲ್ಲಿರುವ ಬೋಳಾಡಿ ಬಸವೇಶ್ವರರ ಬೃಹನ್ಮಠದ ಆವರಣಕ್ಕೆ ಮಳೆ ನೀರು ನುಗ್ಗಿದ್ದು, ಮಠಕ್ಕೆ ಬರುವ ಭಕ್ತರು ಪರದಾಡುವಂತಾಗಿದೆ. ಸುತ್ತಲಿನ ಹೊಲ, ಗದ್ದೆಗಳಿಂದ ನೀರು ಹರಿದು ಬರುತ್ತಿದೆ. ಗ್ರಾಮದ ಚರಂಡಿಗಳ ನೀರು ಸಹ ಮಠದ ಆವರಣಕ್ಕೆ ನುಗ್ಗುತ್ತಿದೆ. ಇದರಿಂದ ಮಠದ ಆವರಣದೊಳಕ್ಕೆ ಭಕ್ತರು ಹೋಗಲು ಆಗುತ್ತಿಲ್ಲ.
'ಮುಸ್ಟೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಇಲ್ಲಿನ ಸಮಸ್ಯೆ ಬಗ್ಗೆ ಗಮನಕ್ಕೆತಂದರೂ ಪ್ರಯೋಜನವಾಗಿಲ್ಲ. ಅಕ್ರಮ, ಕಾನೂನು ಬಾಹಿರ ಚಟುವಟಿಕೆಗೆ ಸ್ಪಂದಿಸುವ ಅಧಿಕಾರಿಗಳು ಭಕ್ತರ ನಂಬಿಕೆಗೆ ಸ್ಪಂದಿಸುತ್ತಿಲ್ಲ' ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು.
‘ಮಠಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ವಿಜಯನಗರ ಅರಸರ ಕಾಲದಲ್ಲಿ ಶಿವಯೋಗಿಗಳು ಬ್ರಹ್ಮರಾಕ್ಷಸನೊರ್ವನನ್ನು ಮಣಿಸಿದ್ದಕ್ಕಾಗಿ ಆತ ಒಂದೇ ರಾತ್ರಿಯಲ್ಲಿ ಶ್ರೀಮಠವನ್ನು ಕಟ್ಟಿದ್ದ ಎಂಬ ದಾಖಲೆ ಮಠದಲ್ಲಿ ಲಭ್ಯ ಇದೆ’ ಎಂದು ಗ್ರಾಮದ ಯಮನೂರಪ್ಪ ಟಿ. ಹೇಳಿದರು.
‘ಗ್ರಾಮ ಪಂಚಾಯಿತಿ ಪಿಡಿಒ ಅಥವಾ ಕ್ಷೇತ್ರದ ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕು. ಮಠದ ಆವರಣದಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು’ ಎಂದು ಗಂಗಾವತಿ ನಗರಸಭೆಯ ಹಣಕಾಸು ಹಾಗೂ ಸ್ಥಾಯಿಸಮಿತಿ ಅಧ್ಯಕ್ಷ ಎಂ. ಮನೋಹರಸ್ವಾಮಿ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.