ADVERTISEMENT

‘ರೋಗಿಗಳ ಸೇವೆಯಲ್ಲಿ ದೇವರ ಕಾಣಿ’

​ಪ್ರಜಾವಾಣಿ ವಾರ್ತೆ
Published 15 ಮೇ 2017, 6:03 IST
Last Updated 15 ಮೇ 2017, 6:03 IST
ಗಂಗಾವತಿ: ಕಾಣದ ದೇವರಿಗೆ ಹುಡುಕುವುದಕ್ಕಿಂತ ತಮ್ಮ ವೃತ್ತಿಯಲ್ಲಿ ದೇವರನ್ನು ಕಾಣಬೇಕು. ಆರೋಗ್ಯ ಕ್ಷೇತ್ರದಲ್ಲಿರುವವರು ಅಶಕ್ತರು, ರೋಗಿಗಳ ಸೇವೆಯಲ್ಲಿ ದೇವರ ಸೇವೆ ಕಾಣಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್. ರಾಮಕೃಷ್ಣ ಹೇಳಿದರು. 
 
ನಗರದ ಭಾರತೀಯ ವೈದ್ಯರ ಸಂಘದ ಭವನದಲ್ಲಿ ಉಪವಿಭಾಗ ಆಸ್ಪತ್ರೆ ಗಂಗಾವತಿ, ಆರೋಗ್ಯ ಇಲಾಖೆ ಹಾಗೂ ಶುಶ್ರೂಷಕಿಯರ ಸಂಘದ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಫ್ಲಾರೆನ್ಸ್ ನೈಟಿಂಗಲ್ ಜಯಂತಿ ಉದ್ದೇಶಿಸಿ ಮಾತನಾಡಿದರು. 
 
ಆರೋಗ್ಯ ಕ್ಷೇತ್ರದಲ್ಲಿ ಸೇವೆ ನೀಡುವವರಿಗೆ ಒಂದು ವಿಶೇಷ ಅವಕಾಶವಿದೆ. ನೋವು, ನರಳಾಟದಲ್ಲಿ ಚಿಕಿತ್ಸೆಗೆ ದಾಖಲಾಗುವ ರೋಗಿಗಳ ಮುಖದಲ್ಲಿ ಶುಶ್ರೂಷೆಯ ಬಳಿಕ ಮಂದಹಾಸ ಮೂಡಿದರೆ ಅದಕ್ಕಿಂತ ದೊಡ್ಡ ಆನಂದ ಮತ್ತೊಂದಿಲ್ಲ ಎಂದು ಹೇಳಿದರು. 
 
ಸಮಾಜದಲ್ಲಿನ ಬಹಳಷ್ಟು ಜನ ರೋಗಿಗಳ ಸೇವೆ ಮಾಡಬೇಕು ಎಂದು ಬಯಸುತ್ತಾರೆ. ಆದರೆ ಅದು ಅಷ್ಟು ಸುಲಭವಲ್ಲ. ದಾದಿಯರಿಗೆ ಮಾತ್ರ ಈ ಅದೃಷ್ಟ ಒಲಿದಿದೆ. ಪ್ರತಿಯೊಬ್ಬರು ಫ್ಲಾರೆನ್ಸ್ ನೈಟಿಂಗಲ್ ಮಾದರಿಯಲ್ಲಿ ಸೇವೆ ನೀಡಬೇಕು ಎಂದು ಕೋರಿದರು. 
 
ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಈಶ್ವರ ಸವುಡಿ ಮಾತನಾಡಿ, ವೈದ್ಯರಾಗಲಿ, ದಾದಿಯರಾಗಲಿ ರೋಗಿಗಳನ್ನು ನಗುಮೊಗದಿಂದ ಉಪಚರಿಸಿದರೆ ರೋಗಿಯ ಶೇ50ರಷ್ಟು ಕಾಯಿಲೆ ವಾಸಿಯಾಗುತ್ತದೆ. ನಗುಮೊಗಕ್ಕೆ ಮಾಂತ್ರಿಕ ಸ್ಪರ್ಶ ಇದೆ ಎಂದರು. 
 
ಇದೇ ವೇದಿಕೆಯಲ್ಲಿ ಹಲವರನ್ನು ಸನ್ಮಾನಿಸಲಾಯಿತು. ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿ ಶರಣಪ್ಪ, ನರ್ಸಿಂಗ್ ಕಾಲೇಜು ಪ್ರಾಚಾರ್ಯ ಬಸವವರಾಜ, ವೈದ್ಯರಾದ ಎಚ್.ಎನ್. ಸಿರಿಗೇರಿ, ಪ್ರವೀಣಕುಮಾರ, ರೂಪಾ, ಅನಿಲ್‌ ರಾಜ್‌, ಸಲಾವುದ್ದೀನ್, ವಿದ್ಯಾಶ್ರೀ ಮುಷ್ಠಿ, ಸುರೇಶಗೌಡ, ಶರಣಬಸವ, ಶರಣಬಸವ ಇದ್ದರು. ಗುರಾಜ ಸಂಗಡಿಗರು ಪ್ರಾರ್ಥಿಸಿದರು. ಪಲ್ಲವಿ ನಿರೂಪಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.