ಪಾಂಡವಪುರ: ತಾಲ್ಲೂಕಿನ ಬೇಬಿಬೆಟ್ಟದ ಕಾವಲು, ಚಿನಕುರಳಿ, ಹೊನಗಾನಹಳ್ಳಿ ಹಾಗೂ ಬನ್ನಂಗಾಡಿ ಸರಹದ್ದಿನ ಬೇಬಿಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನ. 10ರಿಂದ ಡಿ.10ರವರೆಗೆ ಕಲಂ144 ಅನ್ವಯ ನಿಷೇಧಾಜ್ಞೆಯನ್ನು ಮುಂದುವರಿಸಲಾಗಿದೆ ಎಂದು ತಹಶೀಲ್ದಾರ್ ಡಿ.ಹನುಮಂತರಾಯಪ್ಪ ಆದೇಶಿಸಿದ್ದಾರೆ.
ಈ ಹಿಂದೆ ಅ. 10ರಿಂದ ನ.10ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಪರಿಸರ ವಿಮೋಚನಾ ಪತ್ರ ಮತ್ತು ಕ್ರಷರ್ಗೆ ಸಂಬಂಧಿಸಿ ಫಾರಂ ‘ಸಿ’ ಇರುವ ಘಟಕಗಳನ್ನು ಹೊರತುಪಡಿಸಿ ಯಾವುದೇ ರೀತಿಯ ಗಣಿಗಾರಿಕೆ ನಡೆಸದಂತೆ ಆದೇಶದಲ್ಲಿ ತಿಳಿಸಲಾಗಿದೆ.
‘ತಾಲ್ಲೂಕು ಚಿನಕುರಳಿ ಹೋಬಳಿಯ ಬೇಬಿಬೆಟ್ಟದ ಕಾವಲು, ಚಿನಕುರಳಿ, ಹೊನಗಾನಹಳ್ಳಿ ಹಾಗೂ ಬನ್ನಂಗಾಡಿ ಸರಹದ್ದಿನ ಬೇಬಿಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಕಲ್ಲು ಕ್ವಾರಿಗಳು ಅಕ್ರಮವಾಗಿವೆ. ಇಲ್ಲಿನ ಗಣಿಗಾರಿಕೆಯಿಂದ ಪರಿಸರಕ್ಕೆ ಹಾನಿ ಉಂಟಾಗುತ್ತಿದ್ದು ಸುತ್ತಲಿನ ಗ್ರಾಮಗಳಲ್ಲಿ ಮನೆಗಳು ಜಖಂಗೊಳ್ಳುವ ಸಾಧ್ಯತೆ ಇದೆ.
ಹೆಚ್ಚು ಭಾರದ ವಾಹನಗಳು ಓಡಾಡುವುದರಿಂದ ಸ್ಥಳೀಯ ರಸ್ತೆಗಳು ಹಾಳಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳಿರುತ್ತದೆ. ಹಾಗೂ ಈ ಪ್ರದೇಶಕ್ಕೆ ಸಮೀಪದಲ್ಲಿ ಕೆಆರ್ಎಸ್ ಅಣೆಕಟ್ಟು ಸಹ ಇದ್ದು, ಇದರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ 30 ದಿನಗಳ ಕಾಲ ನಿಷೇಧಾಜ್ಞೆ ಮುಂದುವರಿಸಲಾಗಿದೆ’ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.