ಶ್ರೀರಂಗಪಟ್ಟಣ: ಕರ್ನಾಟಕ ಹಾಲು ಮಹಾ ಮಂಡಳ (ಕೆಎಂಎಫ್)ದ ಉತ್ಪನ್ನಗಳನ್ನು ಸಂಚಾರಿ ವಾಹನದ ಮೂಲಕ ಮಾರಾಟ ಮಾಡುವ ಪ್ರಕ್ರಿಯೆಗೆ ಕೆಎಂಎಫ್ ನಿರ್ದೇಶಕ ಬಲರಾಂ ಶನಿವಾರ ಚಾಲನೆ ನೀಡಿದರು.
ತಾಲ್ಲೂಕಿನ ಬೆಳಗೊಳ ಪಂಪ್ಹೌಸ್ ಬಳಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ‘ನಂದಿನಿ ಹಾಲು, ಮೊಸರು, ಬೆಣ್ಣೆ, ಮಜ್ಜಿಗೆ, ಪೇಡ, ಐಸ್ಕ್ರೀಂ, ಬಿಸ್ಕತ್, ಹಾಲಿನ ಪುಡಿ ಇತರ ಉತ್ಪನ್ನಗಳನ್ನು ವಾಹನದಲ್ಲಿ ಇಟ್ಟು ಮಾರಾಟ ಮಾಡಲಾಗುವುದು. ಗ್ರಾಮೀಣ ಪ್ರದೇಶಕ್ಕೂ ಕೊಂಡೊಯ್ಯಲಾಗುವುದು.
ಉತ್ತಮ ಗುಣಮಟ್ಟಕ್ಕೆ ಹೆಸರಾಗಿರುವ ನಂದಿನಿ ಉತ್ಪನ್ನಗಳಿಗೆ ಖಾಸಗಿ ಡೇರಿಗಳ ಉತ್ಪನ್ನಗಳಿಗಿಂತ ಹೆಚ್ಚು ಬೇಡಿಕೆ ಇದೆ. ಆದರೆ ಗ್ರಾಹಕರಿಗೆ ತಲುಪಿಸುವಲ್ಲಿ ವಿಫಲರಾಗಿದ್ದೇವೆ. ಮೊಬೈಲ್ ಮಾರಾಟದ ಮೂಲಕ ಪ್ರತಿ ಹಳ್ಳಿಗೆ ನಮ್ಮ ಉತ್ಪನ್ನಗಳು ತಲುಪಲಿವೆ’ ಎಂದು ಹೇಳಿದರು.
ಮೈಸೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಶಿವಲಿಂಗೇಗೌಡ ಮಾತನಾಡಿ, ‘ಸ್ಥಳೀಯ ರೈತರ ಹಾಲು ಖರೀದಿಸಿ ನಂದಿನಿ ಹೆಸರಿನಲ್ಲಿ ಹಾಲು ಮತ್ತು ಉಪ ಉತ್ಪನ್ನಗಳನ್ನು ಸಿದ್ಧಪಡಿಸಿ ಮಾರಾಟ ಮಾಡಲಾಗುತ್ತಿದೆ. ಉತ್ತಮ ಗುಣಮಟ್ಟದ ಕಾರಣಕ್ಕೆ ಕೆಂಎಫ್ಗೆ ಸರ್ಕಾರದಿಂದ ಪ್ರಮಾಣ ಪತ್ರ ಕೂಡ ಸಿಕ್ಕಿದೆ.
ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾದಷ್ಟೂ ರಾಜ್ಯದ ಹಾಲು ಉತ್ಪಾದಕರಿಗೆ ಅನುಕೂಲವಾಗಲಿದೆ’ ಎಂದರು. ಪಾಲಹಳ್ಳಿ ಗಿರೀಗೌಡ, ಮನೋಹರ್ಗೌಡ, ವಿನಯ್ ಈ ಸಂದರ್ಭದಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.