ಮದ್ದೂರು: ಪೂರ್ವ ನಿಗದಿತ ಸಭೆಗೆ ತಡವಾಗಿ ಬಂದ ತಹಶೀಲ್ದಾರ್ ವರ್ತನೆ ಖಂಡಿಸಿ ದಲಿತ ಸಂಘಟನೆಗಳ ಮುಖಂಡರು ಸಭೆ ಬಹಿಷ್ಕರಿಸಿ ಗುರುವಾರ ಪ್ರತಿಭಟನೆ ಮಾಡಿದರು.
ತಾಲ್ಲೂಕು ಕಚೇರಿಯಲ್ಲಿ ಗುರುವಾರ ಸಂಜೆ 5 ಗಂಟೆಗೆ ಪರಿಶಿಷ್ಟ ಜಾತಿ ಮತ್ತ ವರ್ಗಗಳ ದೌರ್ಜನ್ಯ ಪ್ರತಿಬಂಧಕ ನಿಯಮ ಕುರಿತು ವಿಚಾರಗೋಷ್ಠಿ ಆಯೋಜಿಸುವ ಸಂಬಂಧ ದಲಿತ ಸಂಘಟನೆಗಳ ಮುಖಂಡರ ಸಭೆ ಕರೆಯಲಾಗಿತ್ತು.
ಆದರೆ, ಸಂಜೆ 5.30ಕ್ಕೆ ತಹಶೀಲ್ದಾರ್ ಹರ್ಷ ಆಗಮಿಸಿದರು. ಆದರೆ, ಸಭೆ ಬಹಿಷ್ಕರಿಸಿದ ಮುಖಂಡರು ಸಭೆಯಿಂದ ಹೊರಬಂದು ತಹಶೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಮುಖಂಡರಾದ ಆತಗೂರು ವೆಂಕಟಾಚಲಯ್ಯ, ದೊರೆಸ್ವಾಮಿ, ಆತ್ಮಾನಂದ, ರಮಾನಂದ, ಅಣ್ಣೂರು ರಾಜಣ್ಣ, ಬಿ.ಎಂ.ಸತ್ಯ, ಅಂಬರೀಷ್, ಗಿರೀಶ್, ಹುಲಿಗೆರೆಪುರ ಸ್ವಾಮಿ, ಬೋರಯ್ಯ, ಕೃಷ್ಣ, ಭಾನುಪ್ರಕಾಶ್, ಶಿವರಾಜು, ಶಿವು ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಹಶೀಲ್ದಾರ್ ಸ್ಪಷ್ಟನೆ: ಬೆಳಿಗ್ಗೆಯಿಂದ ತಾಲ್ಲೂಕಿನ ವಿವಿಧೆಡೆ ಬರಪರಿಹಾರ ಕಾಮಗಾರಿ ನಿರ್ವಹಣೆ ಸಂಬಂಧ ಭೇಟಿ ನೀಡಿದ್ದೆ. ಸಂಜೆ ಕೌಡ್ಲೆ ಗ್ರಾಮದಲ್ಲಿ ತುರ್ತು ಕುಡಿಯುವ ನೀರಿನ ಸಮಸ್ಯೆ ಉದ್ಭವಿ ಸಿದ ಪರಿಣಾಮ ಅಲ್ಲಿಗೆ ತೆರಳಿದ್ದೆ. ಹೀಗಾಗಿ, ಸಭೆಗೆ ಬರುವುದು 30 ನಿಮಿಷ ತಡವಾಯಿತು. ಇದೇ ಸಭೆಯನ್ನು ಮಾರ್ಚ್ 6ರಂದು ಕರೆಯಲಾಗಿದ್ದು, ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಬೇಕು ಎಂದು ಕೋರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.