ಶ್ರೀರಂಗಪಟ್ಟಣ: ಹಾಡ ಹಗಲೇ ದುಷ್ಕರ್ಮಿಗಳು ಮನೆಗೆ ನುಗ್ಗಿ ಚಿನ್ನಾಭರಣ ದೋಚಿರುವ ಪ್ರಕರಣ ತಾಲ್ಲೂಕಿನ ಚಿಕ್ಕಪಾಳ್ಯ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ಕೃಷ್ಣೇಗೌಡ ಎಂಬವರ ಮಗ ಶಿವಣ್ಣ ಅವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಹಾಸಿಗೆಯ ಕೆಳಗೆ ಇದ್ದ ಬೀಗದ ಕೀ ತೆಗೆದು ಅದರಿಂದ ಬೀರು ಬಾಗಿಲು ತೆರೆದು ಚಿನ್ನಾಭರಣಗಳನ್ನು ದೋಚಲಾಗಿದೆ.
ಪರಿಚಯ ಇರುವವರೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಓಲೆಗಳು, ಲಾಂಗ್ ಸರ, ಉಂಗುರ, ಪದಕ ಸೇರಿ ಸುಮಾರು 650 ಗ್ರಾಂಗಿಂತಲೂ ಹೆಚ್ಚು ಚಿನ್ನಾಭರಣವನ್ನು ಅಪಹರಿಸಲಾಗಿದೆ. ಬೆಳ್ಳಿ ತಟ್ಟೆ ಮತ್ತು ಚೊಂಬು ಬಿಟ್ಟು ಚಿನ್ನಾಭರಣ ಮಾತ್ರ ಕಳವು ಮಾಡಲಾಗಿದೆ.
ಶಿವಣ್ಣ ಅವರ ಸಹೋದರಿ ಪ್ರೇಮಮ್ಮ ಎಂಬವರು ಸ್ನಾನ ಮಾಡಿ ಬರುವಷ್ಟರಲ್ಲಿ ಈ ಪ್ರಕರಣ ಕಳವು ನಡೆದಿದೆ. ಸ್ಥಳಕ್ಕೆ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನೀಡಿದರು.
‘ಬೈಕ್ನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಶಿವಣ್ಣ ಎಲ್ಲಿದ್ದಾರೆ ಎಂದು ಕೇಳಿದ. ನಂತರ ಹೊರ ಹೋದ ಆತ ಮತ್ತೆ ಬರಲಿಲ್ಲ. ನಾನು ಸ್ನಾನ ಮುಗಿಸಿ ಬರುವಷ್ಟರಲ್ಲಿ ಕಳ್ಳತನ ನಡೆದಿತ್ತು’ ಎಂದು ಪ್ರೇಮಮ್ಮ ಪೊಲೀಸರ ಎದುರು ಹೇಳಿದ್ದಾರೆ. ಆರೋಪಿಗಳ ಪತ್ತೆಗೆ ತಂಡ ರಚಿಸಲಾಗುವುದು ಎಂದು ಡಿವೈಎಸ್ಪಿ ವಿಶ್ವನಾಥ್ ತಿಳಿಸಿದ್ದಾರೆ. ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ಗ್ರಾಮದ ನಾಗಣ್ಣ ಎಂಬವರ ಮನೆಯಲ್ಲಿ ಮಾರ್ಚ್ 15ರಂದು 6 ದೊಡ್ಡ ಮೇಕೆಗಳು ಮತ್ತು ಮಲ್ಲೇಶ್ ಅವರ ಮನೆಯಲ್ಲಿ 3 ಟಗರುಗಳು ಕಳವಾಗಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.