ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಸ್ಥಳಾಂತರಗೊಂಡಿರುವ ಬುಡಕಟ್ಟು ಜನರ ಪುನರ್ವಸತಿಗೆ ರಚಿಸಿದ್ದ ಪ್ರೊ.ಮುಜಾಫರ್ ಅಸ್ಸಾದಿ ಸಮಿತಿ ನೀಡಿರುವ ವರದಿಯನ್ನು 10 ದಿನದ ಒಳಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.
ಪ್ರೊ.ಮುಜಾಫರ್ ಅಸ್ಸಾದಿ ಸಮಿತಿ ವರದಿ ಅನುಷ್ಠಾನಕ್ಕೆ ಜಿಲ್ಲಾಡಳಿತವು ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
ನಾಗರಹೊಳೆ ಅಭಯಾರಣ್ಯದಿಂದ 3,418 ಗಿರಿಜನ ಕುಟುಂಬಗಳನ್ನು ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಸ್ಥಳಾಂತರ ಮಾಡಲಾಗಿದೆ ಎಂದು ಸಮಿತಿ ವರದಿ ನೀಡಿತ್ತು. ಈ ಕುರಿತು ಪರಿಶೀಲನೆ ನಡೆದಿದ್ದು, ವರದಿಯಲ್ಲಿರುವ 3,418 ಗಿರಿಜನರ ಕುಟುಂಬಗಳ ಪೈಕಿ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ 1,801, ಹುಣಸೂರು ತಾಲ್ಲೂಕಿನಲ್ಲಿ 1,106 ಮತ್ತು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನಲ್ಲಿ 511 ಕುಟುಂಬಗಳಿವೆ. ಇವರಲ್ಲಿ ಡಬಲ್ ಎಂಟ್ರಿ ಮತ್ತು ಬೀಚನಹಳ್ಳಿ ಕಬಿನಿ ಡ್ಯಾಂ ನಿರ್ಮಾಣ ವೇಳೆ ಸ್ಥಳಾಂತರಗೊಂಡಿದ್ದ ಗಿರಿಜನರು ಸಹ ಇದ್ದಾರೆ ಎಂದು ಹೇಳಿದರು.
ಪುನರ್ವಸತಿಗೆ ಅರ್ಹರಾಗಿರುವ 3,219 ಗಿರಿಜನ ಕುಟುಂಬಗಳಿಗೆ ಅರಣ್ಯ ಇಲಾಖೆಯಿಂದ ಪರಿಹಾರ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ಕೋರಲಾ ಗುವುದು ಎಂದು ತಿಳಿಸಿದರು. ನಾಗರಹೊಳೆ ಉದ್ಯಾನದಿಂದ ಬುಡಕಟ್ಟು ಜನರ ಸ್ಥಳಾಂತರ ಹಾಗೂ ಪುನರ್ವಸತಿ ಸಂಬಂಧ ಹೈಕೋರ್ಟ್ ಆದೇಶದ ಮೇರೆಗೆ ರಚಿಸಿದ ಪ್ರೊ.ಅಸಾದಿ ಸಮಿತಿಯ ಅಂತಿಮ ವರದಿಯನ್ನು ಮಂಡಿಸ ಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.