ADVERTISEMENT

ಆರ್‌ಟಿಪಿಎಸ್ ಕಾಲೊನಿ: ಸೌಲಭ್ಯ ಮರೀಚಿಕೆ

ಅಸಮರ್ಪಕ ಚರಂಡಿ, ಹಂದಿ, ನಾಯಿಗಳ ಹಾವಳಿ: ನಿವಾಸಿಗಳ ಪರದಾಟ

ಉಮಾಪತಿ ಬಿ.ರಾಮೋಜಿ
Published 31 ಜನವರಿ 2017, 7:22 IST
Last Updated 31 ಜನವರಿ 2017, 7:22 IST
ಶಕ್ತಿನಗರದ ಆರ್‌ಟಿಪಿಎಸ್‌ ಪೊಲೀಸ್ ಕಾಲೊನಿಯ ಹದಗೆಟ್ಟ ರಸ್ತೆಗಳು
ಶಕ್ತಿನಗರದ ಆರ್‌ಟಿಪಿಎಸ್‌ ಪೊಲೀಸ್ ಕಾಲೊನಿಯ ಹದಗೆಟ್ಟ ರಸ್ತೆಗಳು   
ಶಕ್ತಿನಗರ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) ಪೊಲೀಸ್ ಕಾಲೊನಿಯಲ್ಲಿ ಮೂಲ ಸೌಲಭ್ಯ ಕೊರತೆಯಿಂದ ನಿವಾಸಿಗಳು ಪರದಾಡುವಂತಾಗಿದೆ. 
 
ಕಾಲೊನಿಯಲ್ಲಿ ಒಟ್ಟು 2,500 ಮನೆಗಳು ಇವೆ. ಇದರಲ್ಲಿ 40ಕ್ಕೂ ಹೆಚ್ಚು ಮನೆಗಳು ಶಿಥಿಲಾವಸ್ಥೆ ತಲುಪಿವೆ. ಈ ಮನೆಗಳು ದುರಸ್ತಿಯಾಗದ ಕಾರಣ ಸಣ್ಣ ಮಳೆಯಾದರೂ   ನೀರು ಸೋರುತ್ತದೆ ಎಂದು ನಿವಾಸಿಗಳು ದೂರುತ್ತಾರೆ.  
 
‘ಅಸಮರ್ಪಕ ಚರಂಡಿಯಿಂದಾಗಿ ಕೊಳಚೆ ನೀರು ಚರಂಡಿಯಲ್ಲಿ ಹರಿಯುತ್ತಿದೆ. ಕಲುಷಿತ ನೀರು ರಸ್ತೆ, ಮನೆಗಳ ಹೊರ ಆವರಣದಲ್ಲಿ ನಿಲ್ಲುತ್ತದೆ. ಇದರಿಂದ ಹಂದಿಗಳ ಹಾವಳಿ ಹೆಚ್ಚಾಗಿದೆ. ಸೊಳ್ಳೆಗಳ ಕಾಟ ವಿಪರೀತವಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಮನೆಗಳ ಮೇಲ್ಛಾವಣಿ ಬಿರುಕು ಬಿಟ್ಟಿದ್ದು, ಸಣ್ಣ ಮಳೆ ಬಂದರೂ ಸೋರುತ್ತವೆ’ಎಂದು ದೂರುತ್ತಾರೆ ಕಾಲೊನಿ ನಿವಾಸಿ ಅಜಿತ್‌.
 
‘ಕಾಲೊನಿಯಲ್ಲಿ ಚರಂಡಿ ಸ್ವಚ್ಛಗೊಳಿಸದ ಕಾರಣ ಕೊಳಚೆ ನೀರು ಸಂಗ್ರಹಗೊಂಡಿದ್ದು, ದುರ್ವಾಸನೆ ಬೀರುತ್ತಿದೆ. ಹಂದಿಗಳ ಹಾವಳಿ ಹೆಚ್ಚಾಗಿದೆ. ಬೀದಿ ನಾಯಿಗಳ ಕಾಟವೂ ಹೆಚ್ಚಿದೆ’ ಎಂದು ಸೂಗಪ್ಪ ದೂರುತ್ತಾರೆ.
 
‘ಮೂಲ ಸೌಕರ್ಯಗಳ ಕೊರತೆ ಹೆಚ್ಚಿದ್ದು, ಕಾಲೊನಿಯ ಹಲವೆಡೆ ರಸ್ತೆಗಳು ಹದಗೆಟ್ಟು, ತಗ್ಗುಗಳು ಬಿದ್ದಿವೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಕನಿಷ್ಠ ಮೂಲ ಸೌಲಭ್ಯ ಒದಗಿಸದ ನಿವಾಸಿಗಳು ಸಮಸ್ಯೆ ಎದುರಿಸುವಂತಾಗಿದೆ. ಈ ಬಗ್ಗೆ ಆರ್‌ಟಿಪಿಎಸ್ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಆರೋಪಿಸುತ್ತಾರೆ ಅವರು. 
 
‘ಚರಂಡಿಯಲ್ಲಿ ತ್ಯಾಜ್ಯ ವಸ್ತುಗಳು ಸುರಿದಿರುವುದರಿಂದ ಕೊಳಚೆ ನೀರು ಸಂಗ್ರಹವಾಗುತ್ತಿದೆ. ತಮ್ಮ ಮನೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕೆಲವೆಡೆ ಶಿಥಿಲಾವಸ್ಥೆಯಲ್ಲಿ ಇರುವ ಮನೆಗಳನ್ನು  ದುರಸ್ತಿ ಮಾಡಲಾಗಿದೆ. ಬಾಕಿ ಇದ್ದ ಮನೆಗಳು ಕಂಡು ಬಂದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತಂದು ದುರಸ್ತಿ ಮಾಡಲಾಗುವುದು’ ಎಂದು ಆರ್‌ಟಿಪಿಎಸ್‌ ಸಿವಿಲ್ ವಿಭಾಗದ ಎಇಇ ಮುನಿಸ್ವಾಮಿ ಹೇಳಿದರು.
 
ಕಾಲೊನಿಯಲ್ಲಿ  ನೀರು ನಿಲ್ಲದಂತೆ ಚರಂಡಿ ನಿರ್ಮಿಸಬೇಕು. ನೈರ್ಮಲ್ಯ ಕಾಪಾಡಬೇಕು  ಹಂದಿ, ನಾಯಿಗಳನ್ನು ಹೊರ ಸಾಗಿಸಬೇಕು ಎಂಬುದು ಇಲ್ಲಿನ ನಿವಾಸಿಗಳ ಆಗ್ರಹ. 
 
**
ಕಾಲೊನಿಯಲ್ಲಿ ಹಲವು ಸಮಸ್ಯೆಗಳಿವೆ. ರಸ್ತೆ ಹದಗೆಟ್ಟಿದೆ. ಮಳೆಗಾಲದಲ್ಲಿ ಮನೆಗಳು ಸೋರುತ್ತಿದ್ದು, ಶೀಘ್ರ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು
-ಸೂಗಪ್ಪ
ಕಾಲೊನಿ ನಿವಾಸಿ  
 
**
ಹಂತ ಹಂತವಾಗಿ ರಸ್ತೆ ದುರಸ್ತಿ ಕೈಗೊಳ್ಳಲಾಗುವುದು. ಕೊಳಚೆ ನೀರು ಮನೆಯ ಸುತ್ತ ನಿಂತಿರುವ ಬಗ್ಗೆ ಮಾಹಿತಿ ನೀಡಿದರೆ ತಕ್ಷಣವೇ ದುರಸ್ತಿ ಮಾಡಲಾಗುವುದು
-ಮುನಿಸ್ವಾಮಿ
ಸಿವಿಲ್ ವಿಭಾಗದ ಅಧಿಕಾರಿ, ಆರ್‌ಟಿಪಿಎಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.