ಶಕ್ತಿನಗರ: ‘ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ (ಆರ್ಟಿಪಿಎಸ್)ನಿಂದ ಕೆಮಿಕಲ್ ಮಿಶ್ರಿತ ಕಲುಷಿತ ನೀರನ್ನು ಕಾಡ್ಲೂರು ಮಾರ್ಗವಾಗಿ ನಾಲೆಗಳ ಮೂಲಕ ನದಿಗೆ ಬಿಡುತ್ತಿದ್ದಾರೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
‘ಸ್ಥಾವರದ ಸುತ್ತಮುತ್ತ ನಿರ್ಮಿಸಿದ ಆವರಣ ಗೋಡೆಯ ಸಣ್ಣ ರಂಧ್ರದಿಂದ ವಿದ್ಯುತ್ ಘಟಕಗಳಿಗೆ ಬಳಕೆ ಮಾಡುವ ಇಂಧನ ಮತ್ತು ಇನ್ನಿತರ ಕೆಮಿಕಲ್ಸ್ ಕಾಡ್ಲೂರು ಮಾರ್ಗದ ನಾಲೆಗಳ ಮೂಲಕ ನೇರವಾಗಿ ಕೃಷ್ಣಾ ನದಿಯ ಒಡಲಿಗೆ ಸೇರುತ್ತಿದೆ’ ಎಂದು ಹೇಳಿದರು.
‘ಕಲ್ಲಿದ್ದಿಲು ಕಡಿಮೆ ಇದ್ದ ಸಂದರ್ಭದಲ್ಲಿ ವಿದ್ಯುತ್ ಉತ್ಪಾದನೆಗೆ ತೊಂದರೆ ಆಗದಂತೆ ಇಂಧನವನ್ನು ಉರಿಸಲಾಗುತ್ತದೆ. ಆನಂತರ ಸಂಗ್ರಹವಾಗುವ ಕಲುಷಿತ ನೀರನ್ನು ಕಾಡ್ಲೂರು ರಸ್ತೆಯ ಮಾರ್ಗದ ಪಕ್ಕದಲ್ಲಿ ಇರುವ ನಾಲೆ ಮೂಲಕ ಬಿಡಲಾಗುತ್ತಿದೆ. ಈ ಕುರಿತು ಪರಿಸರ ಅಧಿಕಾರಿಗಳಿಗೆ ದೂರು ನೀಡುತ್ತೇವೆ’ ಎಂದು ಕಾಡ್ಲೂರು ನಿವಾಸಿಗಳಾದ ಸುರೇಶ, ವೆಂಕಟೇಶ, ಸಿದ್ರಾಮಯ್ಯ ತಿಳಿಸಿದರು.
‘ಆರ್ಟಿಪಿಎಸ್ 5ನೇ ವಿದ್ಯುತ್ ಘಟಕದ ಸೇಫ್ಟಿ ವಾಲ್ ಮೂಲಕ ಆಯಿಲ್ ಸೋರಿಕೆ ಆಗಿದೆ. ಕೆಲಸದ ವೇಳೆ ಆಕಸ್ಮಿಕವಾಗಿ ಈ ಘಟನೆ ನಡೆದಿದೆ. ಈಗಾಗಲೇ ದುರಸ್ತಿ ಕಾರ್ಯ ಮುಗಿಸಿ ಸೋರಿಕೆ ಆಗದಂತೆ ತಡೆಯಲಾಗಿದೆ. ನಾಲೆಯ ಕಲುಷಿತ ನೀರಿಗೆ ಸೇರಿದೆ. ಆದರೆ ರಾಸಾಯನಿಕ ನೀರು ನದಿಗೆ ಬಿಡುತ್ತಿಲ್ಲ’ ಎಂದು ಆರ್ಟಿಪಿಎಸ್ ಅಧಿಕಾರಿಗಳು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.