ADVERTISEMENT

ವ್ಯಾಗನ್‌ಗೆ ರೈಲು ಎಂಜಿನ್‌ ಡಿಕ್ಕಿ: ತಪ್ಪಿದ ಅನಾಹುತ

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 7:03 IST
Last Updated 3 ಜನವರಿ 2018, 7:03 IST
ಶಕ್ತಿನಗರದ ಆರ್‌ಟಿಪಿಎಸ್‌ ನಲ್ಲಿ ವ್ಯಾಗನ್‌ ರೈಲು ಎಂಜಿನ್‌ ಡಿಕ್ಕಿ ಹೊಡೆದಿರುವುದು
ಶಕ್ತಿನಗರದ ಆರ್‌ಟಿಪಿಎಸ್‌ ನಲ್ಲಿ ವ್ಯಾಗನ್‌ ರೈಲು ಎಂಜಿನ್‌ ಡಿಕ್ಕಿ ಹೊಡೆದಿರುವುದು   

ಶಕ್ತಿನಗರ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ (ಆರ್‌ಟಿಪಿಎಸ್‌) ಕಲ್ಲಿದ್ದಲು ಖಾಲಿ ಮಾಡಿಕೊಂಡು ಹೋಗುತ್ತಿದ್ದ ವ್ಯಾಗನ್‌ಗೆ ರೈಲು ಎಂಜಿನ್‌ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಕಲ್ಲಿದ್ದಲು ಗಣಿ ಕಂಪನಿಯಿಂದ (59 ವ್ಯಾಗನ್‌ಗಳ ಇರುವ ಒಂದು ರೇಕ್‌) ಆರ್‌ಟಿಪಿಎಸ್‌ಗೆ ಕಲ್ಲಿದ್ದಲು ಪೂರೈಕೆ ಮಾಡಲಾಗಿತ್ತು. ರಾತ್ರಿ 9 ಗಂಟೆ ಸುಮಾರಿಗೆ ಕಲ್ಲಿದ್ದಲು ಖಾಲಿ ಮಾಡಿಕೊಂಡು ಹೊರಗಡೆ ಹೋಗುತ್ತಿದ್ದ ವ್ಯಾಗನ್‌ಗೆ ಇನ್ನೊಂದು ಹಳಿ ಮೂಲಕ ಬರುತ್ತಿದ್ದ ಸ್ಥಾವರದ ಒಳಗಡೆ ಬರುತ್ತಿದ್ದ ಎಂಜಿನ್ ಡಿಕ್ಕಿ ಹೊಡೆದಿದೆ.

ರೈಲು ಹಳಿಯಲ್ಲಿ ಒಂದು ವ್ಯಾಗನ್‌ ಬೋಗಿ ಹೋದ ನಂತರ ಮತ್ತೊಂದು ವ್ಯಾಗನ್‌ ಬೋಗಿ ಕರೆ ತರುವ ರೈಲು ಎಂಜಿನ್‌ ಎಲ್‌ಸಿ (ಲೈನ್‌ಕ್ಲಿಯರ್‌) ತೆಗೆದುಕೊಂಡ ನಂತರ ಹೋಗಬೇಕು. ಲೈನ್‌ ಕ್ಲಿಯರ್‌ ಆಗಿಲ್ಲ, ಹೋಗಬೇಡಿ ಎಂದು ಹೇಳಿದರೂ ರೈಲಿನ ಲೋಕಲ್‌ ಆಪರೇಟರ್‌ ಎಂಜಿನ್ ಚಲಾಯಿಸಿಕೊಂಡು ಹೋಗಿದ್ದು ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಈ ವಿಷಯ ತಿಳಿದ ಗುಂತಕಲ್‌ ರೈಲ್ವೆ ಇಲಾಖೆಯ ಸಿಬ್ಬಂದಿ ಮಂಗಳವಾರ ಬೆಳಿಗ್ಗೆ ಆರ್‌ಟಿಪಿಎಸ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಅಪಘಾತದಿಂದ ರೈಲು ವ್ಯಾಗನ್‌ ಬೋಗಿಗಳ ಗಾಲಿಗಳು ಕಿತ್ತು ಹೋಗಿದ್ದು, ಗುಂತಕಲ್ ಸಿಬ್ಬಂದಿ ದುರಸ್ತಿ ಕಾರ್ಯ ಕೈಗೆತ್ತಿಕೊಂಡರು.

ADVERTISEMENT

ಕ್ರಮ ಕೈಗೊಳ್ಳದ ಆಡಳಿತ ಮಂಡಳಿ: ಆರ್‌ಟಿಪಿಎಸ್‌ನಲ್ಲಿ ಯಾವುದೇ ಅವಘಡಗಳು ಸಂಭವಿಸಿದರೂ ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್‌) ಆಡಳಿತ ಮಂಡಳಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ.

ರೈಲಿನ ಲೋಕಲ್‌ ಆಪರೇಟರ್‌ ಸೇರಿದಂತೆ ಕೆಲ ಉದ್ಯೋಗಿಗಳು ಮದ್ಯಪಾನ ಮಾಡಿ ಬರುತ್ತಾರೆ ಎಂದು ಕೇಂದ್ರ ಭದ್ರತಾ ಪಡೆಯ (ಸಿಐಎಸ್‌ಎಫ್‌) ಅಪರಾಧ ತಂಡದ ಅಧಿಕಾರಿಗಳು, ಆಡಳಿತ ಮಂಡಳಿ ಗಮನಕ್ಕೆ ತಂದಿದ್ದಾರೆ. ಆದರೆ, ಕೆಪಿಸಿಎಲ್ ಆಡಳಿತ ಮಂಡಳಿ ಒತ್ತಡಕ್ಕೆ ಮಣಿದು ತಪ್ಪಿಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.