ADVERTISEMENT

ಕನಕಪುರ: ಕಾಡು ಹಂದಿ ದಾಳಿಗೆ ಬೆಳೆಗಳ ನಾಶ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2015, 10:03 IST
Last Updated 5 ಅಕ್ಟೋಬರ್ 2015, 10:03 IST

ಕನಕಪುರ:  ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಕಾಳು ಸೇರಿದಂತೆ ಬೆಳೆದಿದ್ದ ಪೈರುಗಳನ್ನು ಕಾಡು ಹಂದಿಗಳು ತಿಂದು ನಾಶ ಮಾಡಿರುವುದಕ್ಕೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲ್ಲೂಕಿನ ಬೂಹಳ್ಳಿ ಗ್ರಾಮದಲ್ಲಿ ನಡೆದಿದೆ.

ತಾಲ್ಲೂಕಿನ ಸಾತನೂರು ಹೋಬಳಿ ಬೂಹಳ್ಳಿ ಗ್ರಾಮ ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇದೆ. ಪ್ರತಿ ಸಾರಿ ಇಲ್ಲಿ ಮುಂಗಾರು ಬಿತ್ತನೆ ಮಾಡಿದ ಮೇಲೆ ಕಾಳು ಮತ್ತು ಪೈರುಗಳನ್ನು ಹಂದಿಗಳು ತಿಂದು ನಾಶಗೊಳಿಸುತ್ತಿವೆ ಎಂದು ರೈತರು ಅಳಲು ವ್ಯಕ್ತಪಡಿಸಿದರು.

‘ಕಾಡು ಪ್ರಾಣಿಗಳನ್ನು ಊರಿನೊಳಗೆ ಬರದಂತೆ  ತಡೆಗಟ್ಟಬೇಕು, ಇಲ್ಲವಾದರೆ ಬೇಸಾಯ ಮಾಡುವುದೇ ಕಷ್ಟವಾಗುತ್ತದೆ. ವರ್ಷ ಪೂರ್ತಿ ಹದಗೊಳಿಸಿ ಮಳೆಗಾಲಕ್ಕೆ ಬಿತ್ತನೆ ಮಾಡಿದರೆ ಕಾಡು ಹಂದಿ ಬೆಳೆಗಳನ್ನು ನಾಶಮಾಡುತ್ತವೆ. ಅಲ್ಪಸ್ವಲ್ಪ ಬೆಳೆದ ಬೆಳೆಯನ್ನು ಕಟಾವಿನ ಸಮಯದಲ್ಲಿ ಆನೆ ನಾಶ ಮಾಡುತ್ತವೆ. ಪ್ರತಿ ಬಾರಿಯೂ ಈ ಘಟನೆ ಮರುಕಳಿಸುತ್ತಿದೆ’ ಎನ್ನುತ್ತಾರೆ ಗ್ರಾಮದ ಮಹಿಳೆ ರತ್ನಮ್ಮ.

‘ಇದು ಕೇವಲ ಒಬ್ಬರ ಸಮಸ್ಯೆಯಲ್ಲ. ಗ್ರಾಮದ  ಸುಮಾರು 400 ಕುಟುಂಬಗಳ ಸಮಸ್ಯೆ ಇದೇ ಆಗಿದೆ. ಒಂದು ಹಿಡಿ ರಾಗಿ, ಜೋಳವನ್ನು ಬೆಳೆಯುವುದು ಅಸಾಧ್ಯವಾಗಿದೆ’ ಎನ್ನುತ್ತಾರೆ ಗ್ರಾಮದ ಮುಖಂಡ ಬೂಹಳ್ಳಿ ಉಮೇಶ್‌. 

  ಈ ಸಂಬಂಧ ಕಾವೇರಿ ವನ್ಯಜೀವಿ ವಿಭಾಗದ ಸಂಗಮ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜಸ್ವಾಮಿ, ವಲಯ ಅರಣ್ಯಾಧಿಕಾರಿ ಮಹಮದ್‌ ಮನ್ಸೂರ್ ಪ್ರತಿಕ್ರಿಯಿಸಿ, ಹಂದಿಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡರು ಪ್ರಯೋಜನವಿಲ್ಲ, ಕಾಡು ಹಂದಿಗಳನ್ನು ಕಾಡಿನಲ್ಲೇ ತಡೆ ಹಿಡಿಯಲು ಸಾಧ್ಯವಿಲ್ಲ.

ಹಂದಿ ಸೇರಿದಂತೆ ಎಲ್ಲಾ ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ. ಇಲಾಖೆಯ ಸಿಬ್ಬಂದಿಗಳನ್ನು ಅರಣ್ಯ ಅಂಚಿನಲ್ಲಿ ನಿಯೋಜನೆ ಮಾಡಿ ಪಟಾಕಿಗಳನ್ನು ಸಿಡಿಸುವ ಮೂಲಕ ಕಾಡಿಗೆ ಓಡಿಸುವ ಪ್ರಯತ್ನ ಮಾಡಲಾಗುವುದು.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.