ADVERTISEMENT

ನೀರಿನ ಸಮಸ್ಯೆ ನಿವಾರಿಸಿ

ಜನಸಂಪರ್ಕ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2014, 9:15 IST
Last Updated 23 ಸೆಪ್ಟೆಂಬರ್ 2014, 9:15 IST
ರಾಮನಗರದ ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್‌ ಅವರು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು
ರಾಮನಗರದ ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್‌ ಅವರು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು   

ರಾಮನಗರ:  ‘ಗ್ರಾಮಗಳಲ್ಲಿ ಎದುರಾ ಗುತ್ತಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಗ್ರಾಮ ಪಂಚಾಯಿತಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕು. ಗ್ರಾ.ಪಂಗಳು ಲಭ್ಯವಿರುವ ವಿವಿಧ ಅನು ದಾನ ಬಳಸಿಕೊಂಡು ಟ್ರ್ಯಾಕ್ಟರ್‌ ಖರೀ ದಿಸಿ, ಟ್ಯಾಂಕರ್‌ ಮೂಲಕ ಅಗತ್ಯವಿರುವ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಬೇಕು’ ಎಂದು ಸಂಸದ ಡಿ.ಕೆ.ಸುರೇಶ್‌ ತಿಳಿಸಿದರು.

ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ಕೊಳವೆ ಬಾವಿ ಕೊರೆಸುವ ವಿಚಾರದಲ್ಲಿ ನಿಯಮ ಪಾಲಿಸಬೇಕು. ಇದು ಪಾರದರ್ಶಕವಾಗಿ ನಡೆಯಬೇಕು. ಪಂಚನಾಮ ಪ್ರಕ್ರಿಯೆ ಸರಿಯಾಗಿ ನಡೆಯಬೇಕು. ಇಲ್ಲದಿದ್ದರೆ ಕೊರೆದ ಕೊಳವೆ ಬಾವಿ ಹಣ ಪಾವತಿ ಯಾಗು ವುದಿಲ್ಲ ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಸಿದರು.

ಹೇಮಾವತಿ ನೀರನ್ನು ತರುವ ಯೋಜನೆ ಮಾಗಡಿ ತಾಲ್ಲೂಕಿಗೆ ಮಾತ್ರ ಸೀಮಿತವಾಗಿದೆ. ಈ ನೀರನ್ನು ರಾಮನಗರಕ್ಕೆ ತರುವ ಯೋಜನೆ ಇಲ್ಲ. ಆದರೆ ಎತ್ತಿನ ಹೊಳೆ ಯೋಜನೆಯಲ್ಲಿ ರಾಮನಗರಕ್ಕೆ ನೀರು ದೊರೆಯುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಸಾರ್ವಜನಿಕರ ದೂರು: ಇಲ್ಲಿನ ಮಾದೇಗೌಡನದೊಡ್ಡಿ ಮತ್ತು ಕೆಂಪ ವಡೇರಹಳ್ಳಿ ಗ್ರಾಮದ ಜನರು ಸಭೆ ಯಲ್ಲಿ ಕುಡಿಯುವ ನೀರಿನ ವಿಷಯ ವಾಗಿ ಸಂಸದರ ಎದುರು ವಾಗ್ವಾದ ನಡೆಸಿದ ಘಟನೆಯೂ ನಡೆಯಿತು.

ಕೊಳವೆ ಬಾವಿಯನ್ನು ಕೊರೆಸದೆ, ಟ್ಯಾಂಕರ್‌ ಮೂಲಕವೂ ಸಮರ್ಪಕ ನೀರು ಪೂರೈಸದೆ ಅಧಿಕಾರಿಗಳು ಗ್ರಾಮದ ಜನರನ್ನು ಬಳಲುವಂತೆ ಮಾಡಿದ್ದಾರೆ ಎಂದು ಕಿಡಿಕಾರಿದರು. ಚಿಕ್ಕಸೂಲಿಕೆರೆ ಗ್ರಾಮದ ಮಹಿಳೆಯರು ತಮ್ಮ ಗ್ರಾಮದಲ್ಲೂ ನೀರಿನ ಸಮಸ್ಯೆ ಇದೆ ಎಂದು ಸಭೆಯ ಗಮನ ಸೆಳೆದರು.

‘ಗ್ರಾಮದ ಜನರ ಸಮಸ್ಯೆ ಆಲಿಸಿದ ಸಂಸದ ಸುರೇಶ್‌, ಕಾವೇರಿ ವಿಷಯಕ್ಕೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಜನರು ಕಿತ್ತಾಡುವಂತೆ ಕುಡಿಯುವ ನೀರಿನ ಗ್ರಾಮಗಳ ನಡುವೆ ಕಿತ್ತಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಇದು ಬೀದಿ ಬೀದಿಯಲ್ಲೂ ಕಂಡು ಬರಬಹುದು. ಅಧಿಕಾರಿಗಳು ಎಚ್ಚೆತ್ತುಕೊಂಡು ಈಗಲೇ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಸಮಸ್ಯೆ ಬಿಗಡಾಯಿಸುತ್ತದೆ’ ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌, ತಾ.ಪಂ ಅಧ್ಯಕ್ಷೆ ಶೋಭಾ ಲಕ್ಷ್ಮಣ್‌ ಕುಮಾರ್‌, ಗ್ರಾ.ಪಂ ಅಧ್ಯಕ್ಷೆ ಭಾನುಮತಿ, ಕೆಪಿಸಿಸಿ ಸದಸ್ಯರಾದ ಕೆ.ರಮೇಶ್‌, ಎ.ಮಂಜು ನಾಥ್‌, ಮುಖಂಡರಾದ ಎಚ್‌.ಎಂ. ಕೃಷ್ಣಮೂರ್ತಿ, ತಹಶೀಲ್ದಾರ್‌ ಮಂಜಪ್ಪ, ತಾ.ಪಂ ಇಒ ವೆಂಕಟೇಶಯ್ಯ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT