ADVERTISEMENT

ಬಸ್‌ ಉರುಳಿ 40 ಮಂದಿಗೆ ಗಾಯ

ಮದುವೆ ಮುಗಿಸಿ ವಾಪಸ್ ಬರುವಾಗ ಅಪಘಾತ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 8:57 IST
Last Updated 14 ಏಪ್ರಿಲ್ 2017, 8:57 IST
ರಾಮನಗರ ತಾಲ್ಲೂಕಿನ ಬೆಜ್ಜರಹಳ್ಳಿ ಕ್ರಾಸ್‌ ಬಳಿ ಅಪಘಾತಕ್ಕೆ ಈಡಾದ ಬಸ್‌
ರಾಮನಗರ ತಾಲ್ಲೂಕಿನ ಬೆಜ್ಜರಹಳ್ಳಿ ಕ್ರಾಸ್‌ ಬಳಿ ಅಪಘಾತಕ್ಕೆ ಈಡಾದ ಬಸ್‌   

ರಾಮನಗರ: ಮದುವೆ ಕಾರ್ಯ ಮುಗಿಸಿಕೊಂಡು ವಾಪಸ್‌ ಆಗುತ್ತಿದ್ದ ಬಸ್‌ ಉರುಳಿಬಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ತಾಲ್ಲೂಕಿನ ಬೆಜ್ಜರಹಳ್ಳಿಕಟ್ಟೆ ಕ್ರಾಸ್ ಸಮೀಪ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ನಡೆಯಿತು.

ಮಾಗಡಿಯಲ್ಲಿ ನಡೆಯುತ್ತಿದ್ದ ಮದುವೆ ಮುಗಿಸಿಕೊಂಡು ಬಿಡದಿ ಬಳಿಯ ಕರೇನಹಳ್ಳಿಗೆ ಹಿಂತಿರುಗುತ್ತಿದ್ದ ವೇಳೆ ಬೆಜ್ಜರಹಳ್ಳಿಕಟ್ಟೆ ಕ್ರಾಸ್ ಬಳಿ ನಿರ್ಮಾಣ ಹಂತದಲ್ಲಿರುವ ಆರ್ಯುವೇದ ಕಾಲೇಜು ಬಳಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆಯಿತು.

ಕೊಡಿಯಾಲ, ಕರೇನಹಳ್ಳಿ ಗ್ರಾಮದ ಭಾಗ್ಯಮ್ಮ (43), ನೀಲಮ್ಮ (42), ದಾಸೇಗೌಡ  (51), ನರಸಿಂಹಯ್ಯ (47) ಎಂಬುವರು ತೀವ್ರಗಾಗಿ ಗಾಯಗೊಂಡಿದ್ದು, ಕೆಂಗೇರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಸಂದರ್ಭ ಬಸ್‌ನಲ್ಲಿ ಸುಮಾರು 60 ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಘಟನೆ ನಂತರ ಚಾಲಕ ಪರಾರಿಯಾಗಿದ್ದಾನೆ.

ಸಿಬ್ಬಂದಿ ಕೊರತೆ: ಅಪಘಾತದ ಬಳಿಕ ಗಾಯಾಳುಗಳನ್ನು ಸ್ಥಳೀಯರ ಸಹಕಾರ ದೊಂದಿಗೆ ರಾಮನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಗಾಯಾಳು ಗಳ ಸಂಬಂಧಿಕರು ಹಾಗೂ ಆಸ್ಪತ್ರೆ ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು.

ತೀವ್ರ ಗಾಯಗೊಂಡಿವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರಾಜ ರಾಜೇಶ್ವರಿ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು.
ರಾಮನಗರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT