ರಾಮನಗರ: ಎರಡು ವರ್ಷಗಳಿಂದ ಬಾಕಿ ಇರುವ ₨19 ಲಕ್ಷ ಪಾವತಿಸಲು ಅಧಿಕಾರಿಗಳು ಹಣ ಅಥವಾ ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿರುವ ಆಹಾರ ಗುತ್ತಿಗೆ ವ್ಯಾಪಾರಿ ಬೆಟ್ಟಸ್ವಾಮಿ ಅವರ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ರಾಮನಗರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಪತ್ರ ಮುಖೇನ ತಿಳಿಸಿದೆ.
ಸಮಾಜ ಕಲ್ಯಾಣ ಇಲಾಖೆಗೆ ಸಹಕಾರ ಸಂಘವು 2013–14, 201–15ನೇ ಸಾಲಿನಲ್ಲಿ ಆಹಾರ ಸಾಮಗ್ರಿ, ತರಕಾರಿ ಒದಗಿಸಲಾಗಿದೆ. ಸಂಘವು ಈ ಸಾಲಿನಲ್ಲಿ ಬೆಟ್ಟಸ್ವಾಮಿ ಅವರ ಅನ್ನಪೂರ್ಣೇಶ್ವರಿ ಇಂಡಸ್ಟ್ರೀಸ್ ಮೂಲಕ ಆಹಾರ ಸಾಮಗ್ರಿ, ತರಕಾರಿ ಖರೀದಿಸಿ ಅದನ್ನು ಇಲಾಖೆಯ ವಿದ್ಯಾರ್ಥಿನಿಲಯಗಳಿಗೆ ರವಾನೆ ಮಾಡಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇಲಾಖೆಯು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಪಾವತಿಸಬೇಕಿರುವ ₨19 ಲಕ್ಷವನ್ನು ಪಾವತಿಸುವಂತೆ ಪತ್ರ ವ್ಯವಹಾರದ ಮೂಲಕ ಕೋರಲಾಗಿತ್ತು.
ಬೆಟ್ಟಸ್ವಾಮಿ ಅವರ ಕೋರಿಕೆಯ ಮೇರೆಗೆ ಅವರಿಗೆ ಆ ಪತ್ರ ವ್ಯವಹಾರದ ಪ್ರತಿಯನ್ನು ಒದಗಿಸಲಾಗಿತ್ತು ಎಂದು ಹೇಳಲಾಗಿದೆ.
‘ಬಾಕಿ ಪಾವತಿಗೆ ಯಾವುದೇ ರೀತಿಯ ಹಣದ ಬೇಡಿಕೆಯನ್ನು ಒಡ್ಡಲಾಗಿಲ್ಲ. ಈ ಬಗ್ಗೆ ಲೋಕಾಯುಕ್ತರಿಗೆ ನೀಡಿರುವ ದೂರಿನಲ್ಲಿ ಹುರುಳಿಲ್ಲ’ ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
‘ಬೆಟ್ಟಸ್ವಾಮಿ ಅವರ ವ್ಯವಹಾರ ಇರುವುದು ಸಂಘದ ಜತೆಯಲ್ಲಿಯೇ ಹೊರತು ಸಮಾಜ ಕಲ್ಯಾಣ ಇಲಾಖೆಯೊಂದಿಗೆ ಅಲ್ಲ. ಹೀಗಾಗಿ ಇಲಾಖೆಯು ಯಾವುದೇ ವ್ಯಕ್ತಿಯ ಹೆಸರಿಗೆ ಚೆಕ್ಗಳನ್ನು ಕೊಡುವುದಿಲ್ಲ. ಕೊಡುವುದಿದ್ದರೆ ಅದನ್ನು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ನೀಡಬೇಕಿರುತ್ತದೆ. ಹಾಗಾಗಿ ಇಲಾಖೆಗೂ ಬೆಟ್ಟಸ್ವಾಮಿಗೂ ಯಾವುದೇ ಸಂಬಂಧ ಇಲ್ಲ’ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.