ADVERTISEMENT

ಬೆಂಗಳೂರಿನಿಂದ ಮೈಸೂರು ಪ್ರಯಾಣಕ್ಕೆ ಐದೂವರೆ ಗಂಟೆ!

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 10:02 IST
Last Updated 18 ಸೆಪ್ಟೆಂಬರ್ 2017, 10:02 IST

ರಾಮನಗರ: ಶ್ರೀರಂಗಪಟ್ಟಣದಲ್ಲಿ ಪುಷ್ಕರ ಮೇಳ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಭಾನುವಾರ ಸಂಚಾರ ದಟ್ಟಣೆ ತೀವ್ರವಾಗಿತ್ತು. ಬೆಂಗಳೂರಿನಿಂದ ಮೈಸೂರಿಗೆ ತಲುಪಲು ಪ್ರಯಾಣಿಕರು ಐದು ಗಂಟೆಗೂ ಹೆಚ್ಚು ಕಾಲ ಸಂಚರಿಸಬೇಕಾಯಿತು.

ಬೆಂಗಳೂರಿನ ನಾಯಂಡಹಳ್ಳಿ, ಕೆಂಗೇರಿ ಬಳಿ ವಾಹನಗಳು ಕಿಲೋಮೀಟರ್ ಗಟ್ಟಲೆ ಸಾಲು ನಿಂತವು. ಬಿಡದಿ ದಾಟಿದ ಬಳಿಕವೂ ಈ ಸಾಲು ಕಡಿಮೆ ಆಗಲಿಲ್ಲ. ರಾಮನಗರದ ಐಜೂರು ವೃತ್ತದಲ್ಲಿ ಸಿಗ್ನಲ್ ದಾಟಲು ನಾಲ್ಕೈದು ಅವಕಾಶಕ್ಕೆ ಕಾಯಬೇಕಾಯಿತು.

ಚನ್ನಪಟ್ಟಣದ ಹೊರವಲಯದಲ್ಲಿ ಇರುವ ಎಪಿಎಂಸಿ ಬಳಿಯಿಂದಲೇ ಮತ್ತೆ ವಾಹನಗಳು ಸಾಲುಗಟ್ಟಿದವು. ಸುಮಾರು ಮೂರು ಕಿ.ಮೀ. ಉದ್ದಕ್ಕೆ ವಾಹನಗಳು ತೆವಳುತ್ತಾ ಸಾಗಬೇಕಾಯಿತು. ಮದ್ದೂರಿನಲ್ಲಿ ತಕ್ಕ ಮಟ್ಟಿಗೆ ಸಂಚಾರಕ್ಕೆ ಅನುಕೂಲ ಇತ್ತಾದರೂ ಮಂಡ್ಯದಲ್ಲಿ ಮತ್ತೆ ಟ್ರಾಫಿಕ್ ಸಮಸ್ಯೆ ಬಿಗಡಾಯಿಸಿತ್ತು. ಫ್ಯಾಕ್ಟರಿ ಸರ್ಕಲ್ ನಿಂದ ಬಸ್ ನಿಲ್ದಾಣದ ಆಚೆಗೂ ಹೆದ್ದಾರಿಯಲ್ಲಿ ವಾಹನ ಸವಾರರು ತಿಣುಕಾಡಿದರು.

ADVERTISEMENT

ಶ್ರೀರಂಗಪಟ್ಟಣದ ಬಾಬುರಾಯನಕೊಪ್ಪಲಿನಿಂದ ಪಶ್ಚಿಮವಾಹಿನಿಯವರೆಗೂ ಹೆದ್ದಾರಿಯಲ್ಲಿ ವಾಹನಗಳ ಸಾಲು ಬೆಳೆದಿತ್ತು. ಅಲ್ಲಲ್ಲಿ ಪೊಲೀಸರು ನಿಂತು ಸಂಚಾರ ನಿಯಂತ್ರಿಸಲು ಪರದಾಡಿದರು.

‘ಬೆಂಗಳೂರಿನಿಂದ ಬೆಳಿಗ್ಗೆ 9 ಗಂಟೆಗೆ ಬಸ್ಸಿನಲ್ಲಿ ಹೊರಟಿದ್ದು, ಮಧ್ಯಾಹ್ನ 1 ಗಂಟೆಗೆ ವೈದ್ಯರನ್ನು ಭೇಟಿ ಆಗಬೇಕಿತ್ತು. ಆದರೆ ಮೈಸೂರು ತಲುಪುವ ವೇಳೆಗಾಗಲೇ 2.30 ಆಗಿದೆ. ವೈದ್ಯರ ಭೇಟಿಯೂ ಕೈತಪ್ಪಿತು. ಈಗ ಇದೇ ಹಾದಿಯಲ್ಲಿ ವಾಪಸ್ ಆಗಬೇಕು' ಎಂದು ಬೆಂಗಳೂರಿನ ಬನಶಂಕರಿ ನಿವಾಸಿ ಶ್ರೀಹರ್ಷ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.