ADVERTISEMENT

ಬೆಣಜಕಲ್ಲುದೊಡ್ಡಿ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 10:52 IST
Last Updated 22 ಜುಲೈ 2017, 10:52 IST
ಬೆಣಚಕಲ್ಲುದೊಡ್ಡಿ ಗ್ರಾಮಕ್ಕೆ ನೀರು ಪೂರೈಸಲು ಒತ್ತಾಯಿಸಿ ಕರ್ನಾಟಕ ಸಮತಾ ಸೈನಿಕ ದಳದವರು ಪ್ರತಿಭಟನೆ ನಡೆಸಿದರು (ಎಡಚಿತ್ರ) ಅಧಿಕಾರಿಗಳು ಬೆಣಜಕಲ್‌ದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಕೊಳವೆಬಾವಿ ಕೊರೆಸಿ ಪಂಪ್‌ ಮೋಟಾರ್ ಅಳವಡಿಸಿರುವುದನ್ನು ಪರಿಶೀಲಿಸಿದರು
ಬೆಣಚಕಲ್ಲುದೊಡ್ಡಿ ಗ್ರಾಮಕ್ಕೆ ನೀರು ಪೂರೈಸಲು ಒತ್ತಾಯಿಸಿ ಕರ್ನಾಟಕ ಸಮತಾ ಸೈನಿಕ ದಳದವರು ಪ್ರತಿಭಟನೆ ನಡೆಸಿದರು (ಎಡಚಿತ್ರ) ಅಧಿಕಾರಿಗಳು ಬೆಣಜಕಲ್‌ದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಕೊಳವೆಬಾವಿ ಕೊರೆಸಿ ಪಂಪ್‌ ಮೋಟಾರ್ ಅಳವಡಿಸಿರುವುದನ್ನು ಪರಿಶೀಲಿಸಿದರು   

ಹಾರೋಹಳ್ಳಿ (ಕನಕಪುರ): ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲವೆಂದು ಆರೋಪಿಸಿ ಬೆಣಜಕಲ್ಲುದೊಡ್ಡಿ ಗ್ರಾಮಸ್ಥರು ಕರ್ನಾಟಕ ಸಮತಾ ಸೈನಿಕ ದಳದ ಕಾರ್ಯಕರ್ತರ ಜತೆಗೂಡಿ ದ್ಯಾವ ಸಂದ್ರ ಗ್ರಾಮ ಪಂಚಾಯಿತಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಬೆಣಜಕಲ್ಲುದೊಡ್ಡಿ ಗ್ರಾಮವು ದ್ಯಾವಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದು ಗ್ರಾಮದಲ್ಲಿ ಆರು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದರೂ ಪಂಚಾಯಿತಿಯವರು ಸರಿಯಾದ ಕ್ರಮ ಕೈಗೊಂಡಿಲ್ಲ. ಗ್ರಾಮಕ್ಕೆ ನೀರಿನ ವ್ಯವಸ್ಥೆ ಮಾಡಿಲ್ಲ ವೆಂದು ಪ್ರತಿಭಟನಾಕಾರರು ದೂರಿದರು.

ಗ್ರಾಮದಲ್ಲಿನ ನೀರಿನ ಸಮಸ್ಯೆ ಸರಿಪಡಿಸುವಂತೆ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗೆ ಲಿಖಿತ ದೂರು ನೀಡ ಲಾಗಿದೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ಸಮಸ್ಯೆ ಸರಿಪಡಿಸುವಂತೆ ಇಂದು ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

ADVERTISEMENT

15ದಿನದೊಳಗೆ ಮಾಡದಿದ್ದರೆ ತಾಲ್ಲೂಕು ಪಂಚಾಯಿತಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ಕೋಟೆ ಕುಮಾರ್‌ ಮಾತನಾಡಿ, ಈ ಗ್ರಾಮದಲ್ಲಿ ಸುಮಾರು 60 ದಲಿತ ಕುಟುಂಬಗಳು ವಾಸಿಸುತ್ತಿವೆ.

ಅಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಪಂಚಾಯಿತಿ ಇಲ್ಲಿಯವರೆಗೂ ಮಾಡಿಲ್ಲ, ಅಲ್ಲಿಂದ ಚುನಾಯಿತರಾದ ಗ್ರಾಮ ಪಂಚಾಯಿತಿ ಸದಸ್ಯ ಜನರ ಸಮಸ್ಯೆ ಕೇಳುತ್ತಿಲ್ಲ ಎಂದು ಆಪಾದಿಸಿದರು. ಟ್ಯಾಂಕರ್ ಮೂಲಕ ನೀರು ಕೊಡುತ್ತಿದ್ದು, ಯಾರಿಗೂ ಸಾಕಾಗುತ್ತಿಲ್ಲ. ಹತ್ತಿರದಲ್ಲೂ ನೀರಿನ ಅನುಕೂಲಗಳಿಲ್ಲ, ದಲಿತರಿಗೆ ವಿಶೇಷ ಅನುದಾನ ಮತ್ತು ಯೋಜನೆಯಡಿ ಮೂಲ ಸೌಕರ್ಯ ಕಲ್ಪಿಸಬೇಕಿದ್ದರೂ ಪಂಚಾಯಿತಿ ಅಧಿ ಕಾರಿ ಮಾಡುತ್ತಿಲ್ಲ ಎಂದು ದೂರಿದರು.

ಗ್ರಾಮದ ಜನರು ಸಮಸ್ಯೆಗೆ ಸ್ಪಂದಿಸದ ಪಂಚಾಯಿತಿ ಸದಸ್ಯ ಪ್ರಭಾ ಕರ್‌ರೆಡ್ಡಿ ಅವರ ಸದಸ್ಯತ್ವ ರದ್ದುಗೊಳಿಸಬೇಕು. ದಲಿತ ಕಾಲೊನಿ ಜನರಿಗೆ ಮೂಲ ಸೌಕರ್ಯ ಕಲ್ಪಿಸದೆ ನಿರ್ಲಕ್ಷ ತೋರಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ ಅವರನ್ನು ಅಮಾನತು ಮಾಡಬೇಕು, ಇಲ್ಲವೇ ಬೇರೆಡೆ ವರ್ಗಾಯಿಸಬೇಕೆಂದು ಒತ್ತಾಯಿಸಿದರು.

ಮುಖಂಡರು ಮಾತನಾಡಿ, ಮೂಲ ಸೌಕರ್ಯ ಕಲ್ಪಿಸಲು ಅವಕಾಶವಿದ್ದರೂ ಪಂಚಾಯಿತಿಯವರು ಸ್ಪಂದಿಸುತ್ತಿಲ್ಲ, ಕೊಳವೆಬಾವಿ ಕೊರೆಸಿ ಮೂರು ತಿಂಗಳಾದರೂ ಅದಕ್ಕೆ ಮೋಟಾರ್‌ ಜೋಡಿಸಿ ನೀರು ಪೂರೈಕೆ ಮಾಡದೆ ಪಂಚಾಯಿತಿಯು ನಿರ್ಲಕ್ಷ ಮಾಡುತ್ತಿದೆ. ನೀರು ಪೂರೈಕೆ ಆಗುವವರೆಗೂ ದಿನಕ್ಕೆ ಎರಡು ಟ್ಯಾಂಕರ್‌ ನೀರು ಪೂರೈಕೆ ಮಾಡಬೇಕೆಂದು ಆಗ್ರಹಿಸಿದರು.

ಪಂಚಾಯಿತಿಗೆ ಬೀಗ ಹಾಕಲು ಮುಂದಾದ ಪ್ರತಿಭಟನಾಕಾರರನ್ನು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶಿವರಾಂ ತಡೆದರು. ಸಮಸ್ಯೆ ಶೀಘ್ರವೇ ಸರಿಪಡಿಸಲಾಗು ವುದು, ಇನ್ನು ಮುಂದೆ ಪಂಚಾಯಿ ತಿಯಿಂದ ಎಲ್ಲಾ ಕೆಲಸಗಳು ಆಗಲಿವೆ, ಶೀಘ್ರವೇ ಮೋಟಾರ್‌ಗೆ ಕರಂಟ್‌ ಸಂಪರ್ಕ ಕೊಡಿಸಿ ನೀರು ಪೂರೈಕೆ ಮಾಡಲಾಗುವುದು. ಅಲ್ಲಿಯ ತನಕ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಿಸುವುದಾಗಿ ಹೇಳಿದರು.

ಇ.ಒ. ಮತ್ತು ಪಿ.ಡಿ.ಒ. ಅವರು ಬೆಣಜಕಲ್ಲುದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಕೊಳವೆಬಾವಿಗೆ ಪಂಪ್‌ ಮೋಟಾರ್‌ ಆಳವಡಿಸಿರುವುದನ್ನು ಹಾಗೂ ಗ್ರಾಮದಲ್ಲಿನ ಸಮಸ್ಯೆ ಪರಿಶೀಲಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದರು.

ಬೆಸ್ಕಾಂ ಎ.ಇ.ಇ.ಗೆ ಮಾತನಾಡಿ ಶೀಘ್ರವೇ ವಿದ್ಯುತ್‌ ಸಂಪರ್ಕ ಕಲ್ಪಿ ಸುವಂತೆ ಕೋರಿದರು. ಕರ್ನಾಟಕ ಸಮತಾ ಸೈನಿಕ ದಳದ ಪದಾಧಿಕಾರಿಗಳಾದ ತುಂಗಣಿ ಉಮೇಶ್‌, ರುದ್ರೇಶ್‌, ಕೋಟೆಪ್ರಕಾಶ್‌, ಅಂಜನ್‌ಮೂರ್ತಿ, ಲೋಕೇಶ್‌, ತಮಟೆ ಮಹದೇವ್‌, ಶಂಭುಲಿಂಗಯ್ಯ, ಸತ್ಯ ಪ್ರಕಾಶ್‌, ಸತ್ಯಮೂರ್ತಿ, ಮುದ್ದುಕೃಷ್ಣ, ಶಂಕರ್‌, ಶಿವಕುಮಾರ್‌, ಶ್ರೀನಿವಾಸ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

* * 

ಪಂಚಾಯಿತಿಯು ಪ್ರಾರಂಭದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿತ್ತು. ಇತ್ತೀಚಿನ ದಿನಗಳಲ್ಲಿ 2–3 ದಿನಗಳಿಗೆ ಒಂದು ಟ್ಯಾಂಕರ್‌ ನೀರು ಕಳಿಸುತ್ತಿದ್ದಾರೆ
ಕೋಟೆ ಕುಮಾರ್
ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.