ADVERTISEMENT

ಮಳೆ ಅಬ್ಬರ: ಕೊಚ್ಚಿಹೋದ ಚೆಕ್‌ ಡ್ಯಾಮ್‌

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 10:29 IST
Last Updated 3 ಸೆಪ್ಟೆಂಬರ್ 2017, 10:29 IST
ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಚೆಕ್‌ಡ್ಯಾಮ್‌ ಒಡೆದಿರುವುದು
ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಚೆಕ್‌ಡ್ಯಾಮ್‌ ಒಡೆದಿರುವುದು   

ರಾಮನಗರ: ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಹಳ್ಳಗಳು ತುಂಬಿ ಹರಿಯುತ್ತಿವೆ. ಕನಕಪುರ ತಾಲ್ಲೂಕಿನಲ್ಲಿ ಶುಕ್ರವಾರ ಸುರಿದ ಭಾರಿ ಮಳೆಯಿಂದಾಗಿ ಸನಂದಾ ಹೊಳೆಯಲ್ಲಿ ಪ್ರವಾಹ ಉಂಟಾದ ಪರಿಣಾಮ ಕೋಡಿಹಳ್ಳಿ ಗ್ರಾಮದ ಸಮೀಪ ನಿರ್ಮಾಣ ಹಂತದಲ್ಲಿದ್ದ ಚೆಕ್‌ ಡ್ಯಾಮ್‌ ಕೊಚ್ಚಿಹೋಗಿದೆ.

ನೀರಿನ ರಭಸಕ್ಕೆ ಸುತ್ತಮುತ್ತಲಿನ ಹತ್ತಾರು ಎಕರೆ ಜಮೀನಿನಲ್ಲಿನ ಫಲವತ್ತಾದ ಮಣ್ಣು ಕೊಚ್ಚಿ ಹೋಗಿದ್ದು, ಹಲವು ತೆಂಗಿನ ಮರಗಳು ಧರೆಗೆ ಉರುಳಿವೆ. ಎರಡು ಮೇಕೆಗಳೂ ನೀರಿನಲ್ಲಿ ಕೊಚ್ಚಿ ಹೋಗಿವೆ.

ನರೇಗಾ ಸೇರಿದಂತೆ ವಿವಿಧ ಯೋಜನೆಗಳ ಒಟ್ಟು ₹30 ಲಕ್ಷ ವೆಚ್ಚದಲ್ಲಿ ಈ ಕಿರು ಅಣೆಕಟ್ಟೆಯನ್ನು ನಿರ್ಮಿಸಲಾಗುತ್ತಿತ್ತು. ಈ ಹಿಂದೆಯೂ ಒಮ್ಮೆ ಮಳೆಯ ರಭಸಕ್ಕೆ ಸಿಕ್ಕು ಚೆಕ್‌ ಡ್ಯಾಮ್ ಹಾಳಾಗಿದ್ದು, ಅದನ್ನು ಪುನರ್‌ ನಿರ್ಮಿಸಲಾಗುತ್ತಿತ್ತು ಎಂದು ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕನಕಪುರ ತಾಲ್ಲೂಕು ಒಂದರಲ್ಲಿಯೇ ಇಂತಹ ಸಾವಿರಕ್ಕೂ ಹೆಚ್ಚು ಚೆಕ್‌ ಡ್ಯಾಮ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಮಳೆಯಿಂದಾಗಿ ಸಾಕಷ್ಟು ಕಡೆ ನೀರು ಸಂಗ್ರಹವಾಗಿದೆ. ವರುಣನ ಅಬ್ಬರ ಹೀಗೆಯೇ ಮುಂದುವರಿದಲ್ಲಿ ಇನ್ನಷ್ಟು ಚೆಕ್‌ಡ್ಯಾಮ್‌ಗಳು ಒಡೆಯುವ ಭೀತಿಯೂ ಎದುರಾಗಿದೆ.

ಕನಕಪುರ ತಾಲೂಕಿನ ಯಲಚವಾಡಿ ಕೆರೆ, ತಟ್ಟೆ ಕೆರೆ, ಚಿಕ್ಕಮಕೊಡ್ಲು ಸೇರಿದಂತೆ ಮೂರು ಕೆರೆಗಳು ಭರ್ತಿಯಾಗಿವೆ. ಮರಳವಾಡಿ ಹಾಗೂ ಕೋಡಿಹಳ್ಳಿ ಹೋಬಳಿಯ ಹಲವು ಹಳ್ಳಗಳಲ್ಲಿ ಪ್ರವಾಹ ಉಂಟಾಗಿದೆ. ಮುಗ್ಗೂರು, ನೇರಳೆಅಟ್ಟಿ, ಕಾಡುಶಿವನಹಳ್ಳಿ ಮೊದಲಾದ ಗ್ರಾಮಗಳಲ್ಲಿ ಕೃಷಿ ಜಮೀನುಗಳು ಜಲಾವೃತಗೊಂಡಿವೆ. ಗೌಡರಕುಟ್ಟೆ ಕೆರೆ ತಡ ರಾತ್ರಿ ಕೊಡಿ ಬಿದ್ದಿದ್ದು, ಹಾರೋಬೆಲೆ ಕಾಲುವೆ ಮೂಲಕ ಹೆಚ್ಚಿನ ನೀರು ಹರಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.