ADVERTISEMENT

ಶೋಚನೀಯ ಸ್ಥಿತಿಯಲ್ಲಿ ಛಾಯಾಗ್ರಹಣ ವೃತ್ತಿ

ಛಾಯಾಚಿತ್ರಗಾರರ ಸಂಘದ ಜಿಲ್ಲಾ ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 4:59 IST
Last Updated 13 ಏಪ್ರಿಲ್ 2017, 4:59 IST

ಚನ್ನಪಟ್ಟಣ: ವಿಧವಿಧದ ಮೊಬೈಳ್‌ಗಳು ಬಂದಿರುವುದರಿಂದ ಇಂದಿನ ದಿನಗಳಲ್ಲಿ ಛಾಯಾಗ್ರಹಣ ವೃತ್ತಿ ಬಹಳ ಶೋಚನೀಯ ಪರಿಸ್ಥಿತಿಯಲ್ಲಿದೆ ಎಂದು ಶಸಕ ಸಿ.ಪಿ.ಯೋಗೇಶ್ವರ್ ವಿಷಾದಿಸಿದರು.

ಪಟ್ಟಣದ ಶತಮಾನೋತ್ಸವ ಭವನದಲ್ಲಿ ಮಂಗಳವಾರ ನಡೆದ ಕರ್ನಾಟಕ ಛಾಯಾಚಿತ್ರಗಾರರ ಸಂಘದ ಜಿಲ್ಲಾ ಘಟಕ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಛಾಯಾಚಿತ್ರಗಾರರನ್ನು ಪ್ರೋತ್ಸಾಹಿಸಲು ಸರ್ಕಾರದ ಮಟ್ಟದಲ್ಲಿ ಚರ್ಚಿಸುತ್ತೇನೆ. ಜೊತೆಗೆ ಛಾಯಾಚಿತ್ರಗಾರರ ಸಂಘದ ಕಾರ್ಯಚಟುವಟಿಕೆಗೆ ಅನುಕೂಲವಾಗುವಂತೆ ಒಂದು ಲಕ್ಷ ರೂಪಾಯಿ ದತ್ತಿ ನೀಡುತ್ತೇನೆ’ ಎಂದರು.

‘ಛಾಯಾಗ್ರಹಣ ಒಂದು ಹವ್ಯಾಸ. ಅಂತಹ ಮಂದಿ ನಮ್ಮಲ್ಲಿ ಹೆಚ್ಚಾಗಿದ್ದಾರೆ. ಆದರೆ ಅದನ್ನೆ ವೃತ್ತಿಯಾಗಿಸಿಕೊಂಡಿರುವವರು ಆಧುನಿಕತೆಯ ನೆರಳಿಗೆ ಸಿಲುಕಿ ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಆಧುನಿಕತೆಗೆ ಒಗ್ಗಿಕೊಂಡು ವೃತ್ತಿಯನ್ನು ಸವಾಲಾಗಿ ಸ್ವೀಕರಿಸಿ ಮುಂದುವರೆಯಬೇಕು’ ಎಂದು ಸಲಹೆ ನೀಡಿದರು.

ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ನಾಗೇಶ್ ಮಾತನಾಡಿ, ಛಾಯಾಚಿತ್ರಗ್ರಹಣ ಹಿಂದೆ ನಾಲ್ಕು ಗೋಡೆಗಳ ಮಧ್ಯೆ ಇತ್ತು. ಆದರೆ ಹೊರಗೆ ಬಂದಿದೆ. ಆಧುನಿಕತೆಯಿಂದ ಮೊಬೈಲ್‌ಗಳೆ ಕ್ಯಾಮೆರಾಗಳಾಗಿ ಬದಲಾಗಿವೆ. ಸಣ್ಣ ಮಕ್ಕಳೂ ಫೋಟೊ ತೆಗೆಯುವುದನ್ನು ರೂಢಿಸಿಕೊಂಡಿದ್ದಾರೆ. ಹಾಗಾಗಿ ಛಾಯಾಗ್ರಾಹಕರು ಆಧುನಿಕ  ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಪ್ರದೀಪ್, ಸಮಾಜಸೇವಕ ರಾಂಪುರ ರಾಜಣ್ಣ, ಮಳೂರುಪಟ್ಟಣ ರವಿ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.