ಚನ್ನಪಟ್ಟಣ: ಮನೆಯ ಬಾಗಿಲು ತೆರೆದು ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿಯನ್ನು ಸಾರ್ವಜನಿಕರ ಸಮಯಪ್ರಜ್ನೆಯಿಂದ ಪೊಲೀಸರು ಬಂಧಿಸಿರುವ ಘಟನೆ ಪಟ್ಟಣದ ನಗರಸಭೆ (ಸಿ.ಎಂ.ಸಿ.) ಬಡಾವಣೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಬಡಾವಣೆಯ ಸಣ್ಣಮ್ಮ ಎಂಬುವವರ ಮನೆಯ ಬಾಗಿಲನ್ನು ನಕಲಿ ಕೀ ಬಳಸಿ ತೆರೆದಿರುವ ಇಬ್ಬರು ಆರೋಪಿಗಳಲ್ಲಿ ಒಬ್ಬ ಮನೆಯ ಒಳಗೆ ಪ್ರವೇಶಿಸಿದ್ದಾನೆ. ಸಣ್ಣಮ್ಮ ಮನೆಯ ಪಕ್ಕದಲ್ಲೇ ಅಂಗಡಿಯನ್ನು ಇಟ್ಟುಕೊಂಡಿದ್ದು, ಅವರ ಅಲ್ಲಿರುವುದನ್ನು ಗಮನಿಸಿ ಈ ಮನೆ ಪ್ರವೇಶ ಮಾಡಿದ್ದಾನೆ. ಮತ್ತೊಬ್ಬ ಬಾಗಿಲ ಬಳಿ ನಿಂತುಕೊಂಡಿದ್ದ. ಅಪರಿಚಿತ ವ್ಯಕ್ತಿಯಬ್ಬ ಬಾಗಿಲ ಬಳಿ ಅನುಮಾನಾಸ್ಪದವಾಗಿ ನಿಂತಿರುವುದನ್ನು ಗಮನಿಸಿರುವ ಜನರು ಸಣ್ಣಮ್ಮನಿಗೆ ವಿಷಯ ತಿಳಿಸಿದ್ದಾರೆ.
ಆಗ ಬಾಗಿಲ ಬಳಿ ನಿಂತಿದ್ದ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಜನರು ಹೊರಗಿನಿಂದ ಮನೆಯ ಬಾಗಿಲನ್ನು ಹಾಕಿ ಒಳಗಿದ್ದ ಮತ್ತೊಬ್ಬ ಕಳ್ಳನನ್ನು ಕೂಡಿ ಹಾಕಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಮನೆಯ ಹೊರಗೆ ಜನರು ಸೇರಿದ್ದನ್ನು ಕಂಡು ಒಳಗಿದ್ದ ಆರೋಪಿ ಗಾಬರಿಯಿಂದ ಮನೆಯ ಒಳಗಿದ್ದ ನೀರಿನ ತೊಟ್ಟಿಯಲ್ಲಿ ಅಡಗಿ ಕುಳಿತಿದ್ದ. ಗ್ರಾಮಾಂತರ ಪೊಲೀಸರು ತೊಟ್ಟಿಯೊಳಗೆ ಅಡಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಆಟೊವೊಂದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.