ಶಿವಮೊಗ್ಗ: ವೃಂದ ಮತ್ತು ನೇಮಕಾತಿ ನಿಯಮಗಳ ಅಂತಿಮ ಅಧಿಸೂಚನೆಗೆ ಆಗ್ರಹಿಸಿ ಕರ್ನಾಟಕ ಪಶುವೈದ್ಯಕೀಯ ಸಂಘದ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವೃಂದ ಮತ್ತು ನೇಮಕಾತಿ ನಿಯಮಗಳಿಗೆ 2017ರ ಏಪ್ರಿಲ್ ಒಳಗೆ ಅಂತಿಮ ಅಧಿಸೂಚನೆ ಹೊರಡಿಸಲು ಹಿಂದೆ ಹೋರಾಟ ನಡೆಸಿದ್ದೆವು. 12ನೇ ಸುತ್ತಿನ ಕಾಲುಬಾಯಿ ರೋಗ ಜ್ವರ ಲಸಿಕಾ ಕಾರ್ಯಕ್ರಮ ಬಹಿಷ್ಕರಿ ಸುವುದಾಗಿಯೂ ಎಚ್ಚರಿಸಿದ್ದೆವು. ಪಶುಸಂಗೋಪನಾ ಇಲಾಖೆ ಸಚಿವರ ಗಮನ ಸೆಳೆದಿದ್ದೆವು.
ಕೂಡಲೇ ಅಂತಿಮ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದರು. ಆದರೆ, ಇದುವರೆಗೂ ಭರವಸೆ ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವರ ಭರವಸೆಗೆ ಸ್ಪಂದಿಸಿ ಲಸಿಕಾ ಕಾರ್ಯಕ್ರಮ ಬಹಿಷ್ಕಾರ ಹಿಂಪಡೆಯಲಾಗಿತ್ತು. 2017ರ ಏಪ್ರಿಲ್ 15ರಂದು ಸಾಮೂಹಿಕ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಿದ್ದೇವೆ. ಆದರೂ ವೃಂದ ಮತ್ತು ನೇಮಕಾತಿ ಅಧಿಸೂಚನೆ ಜಾರಿಗೊಳಿಸಿಲ್ಲ ಎಂದು ದೂರಿದರು.
ಮೇ 16ರಿಂದ ರಾಜ್ಯದ ಎಲ್ಲ ಪಶುಚಿಕಿತ್ಸಾಲಯ ಮತ್ತು ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ ಸಂಪೂರ್ಣ ಬಂದ್ ಮಾಡಲಾಗಿದೆ. ಎಲ್ಲ ಸೇವೆ ಸ್ಥಗಿತಗೊಳಿ, ಮುಷ್ಕರ ಆರಂಭಿಸಿದ್ದೇವೆ ಎಂದು ತಿಳಿಸಿದರು. ಸಂಘದ ಅಧ್ಯಕ್ಷ ಎನ್.ಎಸ್. ಜಯಪ್ರಕಾಶ್, ಪ್ರಧಾನ ಕಾರ್ಯದರ್ಶಿ ಕೆ. ಬಸವರಾಜ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.