ADVERTISEMENT

ಇನ್ನೂ ಈಡೇರದ ಸರ್ಕಾರಿ ಉದ್ಯೋಗದ ಕನಸು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 9:08 IST
Last Updated 14 ನವೆಂಬರ್ 2017, 9:08 IST

ಶಿವಮೊಗ್ಗ: ನೂರಾರು ಅಡುಗೆ ತಯಾರಕರು, ಅಡುಗೆ ಸಹಾಯಕರು ಹಾಗೂ ಕಾವಲುಗಾರರು ನಿಯಮ ಬದ್ಧವಾಗಿ ಆಯ್ಕೆಯಾಗಿದ್ದರೂ ನೇಮಕಾತಿ ಆದೇಶ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಲ್ಲಿ ಖಾಲಿಯಿರುವ ಅಡುಗೆ ತಯಾರಕರು, ಅಡುಗೆ ಸಹಾಯಕರು ಹಾಗೂ ಕಾವಲುಗಾರರ ಹುದ್ದೆಗಳ ನೇರ ನೇಮಕಾತಿಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 2016ರ ಸೆ.20ರಂದು ಅಧಿಸೂಚನೆ ಹೊರಡಿಸಲಾಗಿತ್ತು.

ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೇಮಕಾತಿ ಪ್ರಕ್ರಿಯೆಯೂ ಮುಗಿದಿದೆ. ಶಿವಮೊಗ್ಗ ಜಿಲ್ಲೆಯಲ್ಲೂ ಅಂಕಪಟ್ಟಿ ಪರಿಶೀಲನೆ, ಅಡುಗೆ ಪ್ರಯೋಗವೂ ನಡೆದಿದ್ದು, ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಲಿಕ ಆಯ್ಕೆ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ. ಆದರೆ, ನೇಮಕಾತಿ ಆದೇಶ ಪ್ರತಿ ಕೈ ಸೇರದೆ ಅಭ್ಯರ್ಥಿಗಳು ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.

ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಒಟ್ಟು 89 ಅಡುಗೆಯವರು, 92 ಅಡುಗೆ ಸಹಾಯಕರು ಹಾಗೂ ಸಮಾಜ ಕಲ್ಯಾಣ ಇಲಾಖೆಯಲ್ಲಿ 36 ಅಡುಗೆ ಸಹಾಯಕರು, 28 ಕಾವಲುಗಾರರು ಅರ್ಜಿ ಆಹ್ವಾನಿಸಲಾಗಿತ್ತು. ಸರ್ಕಾರಿ ನೌಕರಿ ಎನ್ನುವ ಕಾರಣಕ್ಕೆ ಎಸ್ಸೆಸ್ಸೆಲ್ಸಿ ಅರ್ಹತೆ ಮೇರೆಗೆ ಕರೆಯಲಾಗಿದ್ದ ಈ ಹುದ್ದೆಗಳಿಗೆ ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಸಹ ಪರೀಕ್ಷೆ ಎದುರಿಸಿ ಯಶಸ್ವಿಯಾಗಿದ್ದರು.

ADVERTISEMENT

ಆದರೆ, ಈ ವರೆಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಇಂದು ಅಥವಾ ನಾಳೆ ಆದೇಶ ಪ್ರತಿ ಕೈ ಸೇರಬಹುದು ಎನ್ನುವ ನಿರೀಕ್ಷೆಯಲ್ಲಿಯೇ ದಿನಗಳನ್ನು ನೂಕುವಂತಾಗಿದೆ.ದ್ದೇಶಿಸಿರುವ ಹುದ್ದೆಗಳಿಗೆ ತಮ್ಮನ್ನೆ ಮುಂದುವರಿಸುವಂತೆ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯವು ಸಹ ಮಧ್ಯಂತರ ಆದೇಶ ನೀಡಿರುವುದರಿಂದ ನ್ಯಾಯ ಯುತವಾಗಿ ಆಯ್ಕೆಯಾಗಿರುವ ಅಭ್ಯರ್ಥಿ ಗಳು ಗೊಂದಲಕ್ಕೆ ಸಿಲುಕುವಂತಾಗಿದೆ.

ನಿತ್ಯವೂ ಅಲೆದಾಟ: ಇರುವ ಸಮಸ್ಯೆ ಬಗೆಹರಿಸಿ ನೇಮಕಾತಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿ ದೂರದ ಬೀದರ್, ಗುಲ್ಬರ್ಗಾ, ಬಾಗಲಕೋಟೆ, ಬೆಳಗಾವಿ, ಉಡುಪಿ ಹೀಗೆ ನಾನಾ ಭಾಗಗಳಿಂದ ಆಯ್ಕೆಯಾದ ಅಭ್ಯರ್ಥಿಗಳು ಸಾವಿರಾರು ರೂಪಾಯಿ ಖರ್ಚು ಮಾಡಿ ಶಿವಮೊಗ್ಗಕ್ಕೆ ಬಂದು ಇಲ್ಲಿನ ಜಿಲ್ಲಾಧಿಕಾರಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಪ್ರತಿಭಟನೆಯನ್ನು ಸಹ ನಡೆಸಿದ್ದರು. ಆದರೆ  ಹೈಕೋರ್ಟ್‌ ತಡೆ ಇದ್ದ ಕಾರಣ ಅಧಿಕಾರಿಗಳು ಏನು ಮಾಡದಂತಾದರು. ದಿಕ್ಕು ತೋಚದಂತಾದ ಅಭ್ಯರ್ಥಿಗಳು ಕೊನೆಗೆ ಸಚಿವ ಎಚ್‌.ಆಂಜನೇಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

ಇಲಾಖೆ ನಿರ್ದೇಶನ: ನಿರಂತರ ಬೇಡಿಕೆ, ಒತ್ತಾಯ, ಹೋರಾಟಗಳಿಗೆ ಮಣಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು  ಹೈಕೋರ್ಟ್‌ನಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯುಕ್ತಾಲಯದಿಂದ ಮಧ್ಯಂತರ ಆದೇಶ ತೆರವುಗೊಳಿಸಲು ಕ್ರಮ ವಹಿಸಿದೆ. ಈಗಾಗಲೇ ಇಲಾಖೆಯ ಆಯುಕ್ತರು ಸಹಾ 2017ರ ಅ.30 ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನ ನೀಡಿ  ಹೈಕೋರ್ಟ್‌ ಆದೇಶಕ್ಕೆ ಒಳಪಟ್ಟು ಕ್ರಮ ವಹಿಸಿ ಅಂತಿಮ ಆದೇಶ ಪಟ್ಟಿ ಹೊರಡಿಸಲು ತಿಳಿಸಿದ್ದಾರೆ. ಆದರೆ ಈವರೆಗೂ ಯಾವುದೇ ಬೆಳವಣಿಗೆಗಳಾಗದ ಕಾರಣ ಈ ನಡುವೆ ಮತ್ತಿನ್ನೇನು ಸಮಸ್ಯೆ ಉದ್ಬವವಾಗುವುದೋ ಎನ್ನುವ ಆತಂಕ ಅಭ್ಯರ್ಥಿಗಳಲ್ಲಿ ಮನೆ ಮಾಡಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯುಕ್ತಾಲಯದಿಂದ ಮಧ್ಯಂತರ ಆದೇಶ ತೆರವುಗೊಳಿಸಲು ಕ್ರಮ ವಹಿಸಿದೆ. ಅದೇ ರೀತಿ ಸಮಾಜ ಕಲ್ಯಾಣ ಇಲಾಖೆಯು ಸಹ ತ್ವರಿತಗತಿಯಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಇತಿಶ್ರೀ ಹಾಡಿ ನೇಮಕಾತಿ ಆದೇಶ ನೀಡಬೇಕು. ಈ ಮೂಲಕ ತಮಗೆ ನ್ಯಾಯ ಕಲ್ಪಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಗೆ ಆಯ್ಕೆಯಾಗಿರುವ ಅಡುಗೆ ಸಹಾಯಕರು ಮತ್ತು ಕಾವಲುಗಾರರು.

ಅನಿಲ್‌ ಸಾಗರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.