ADVERTISEMENT

‘ಜಾಗತೀಕರಣದಿಂದ ಸಿನಿಮಾಗಳಲ್ಲಿ ನೈತಿಕ ಮೌಲ್ಯಗಳ ಪಲ್ಲಟ’

ಹೆಗ್ಗೋಡು ನೀನಾಸಂ ಸಂಸ್ಕೃತಿ ಶಿಬಿರ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2014, 9:50 IST
Last Updated 8 ಅಕ್ಟೋಬರ್ 2014, 9:50 IST

ಸಾಗರ: ಜಾಗತೀಕರಣ ಪ್ರಭಾವದ ಮಾರುಕಟ್ಟೆಯ ಸ್ವರೂಪದಿಂದಾಗಿ ದೇಶದ ಜನಪ್ರಿಯ ಸಿನಿಮಾಗಳಲ್ಲಿ ನೈತಿಕ ಮೌಲ್ಯಗಳು ಪಲ್ಲಟಗೊಂಡಿವೆ ಎಂದು ಸಿನಿಮಾ ವಿಮರ್ಶಕ ಎಂ.ಕೆ. ರಾಘವೇಂದ್ರ ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಮಂಗಳವಾರ ‘ಭಾರತದ ಜನಪ್ರಿಯ ಸಿನಿಮಾಗಳಲ್ಲಿ ಭಾರತೀಯತೆಯ ಪರಿಕಲ್ಪನೆ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ಜನಪ್ರಿಯ ಸಿನಿಮಾಗಳಲ್ಲಿ 1995ರ ನಂತರ ಹೊಸ ನೈತಿಕತೆ ಪರಿಕಲ್ಪನೆಯ ಮಾದರಿಯನ್ನು ಕಾಣಬಹುದಾಗಿದೆ. ಕುಟುಂಬ ಮೌಲ್ಯ, ನ್ಯಾಯ ಅನ್ಯಾಯಗಳ ಪರಿಕಲ್ಪನೆ ಸಂಪೂರ್ಣವಾಗಿ ಈಗ ಬದಲಾಗಿದೆ. ಅನೈತಿಕ ಮಾರ್ಗದಿಂದ ಸಂಪತ್ತು ಗಳಿಸಿದರೂ ಅದು ನ್ಯಾಯಬದ್ಧ ಎಂದು ಪ್ರತಿಪಾದಿಸುವ ಸಿನಿಮಾಗಳು ಬರುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಸಿನಿಮಾಗಳು ಸಂಪೂರ್ಣವಾಗಿ ಉದ್ಯಮದ ಸ್ವರೂಪ ಪಡೆದಿದೆ. ಈ ಕಾರಣಕ್ಕೆ ಬಾಲಿವುಡ್‌ನಲ್ಲಿ ಪ್ರಮುಖ ನಿರ್ದೇಶಕರೆ ನಿರ್ಮಾಪಕರಲ್ಲಿ ಒಬ್ಬರಾಗಿ ನಾಮ ಮಾತ್ರಕ್ಕೆ ಬೇರೊಬ್ಬ ವ್ಯಕ್ತಿಯನ್ನು ನಿರ್ದೇಶಕ ಎಂದು ಹೆಸರಿಸಿ ನಿರ್ದೇಶಕರ ಸಂಭಾವನೆಯನ್ನು ತಾವೇ ಪಡೆಯುವ ವಿದ್ಯಮಾನ ನಡೆಯುತ್ತಿದೆ ಎಂಬುದನ್ನು ವಿವರಿಸಿದರು.

ಮುಕ್ತ ಮಾರುಕಟ್ಟೆಯ ಕಾರಣಕ್ಕೆ ಕಾಲ ಕಲ್ಪನೆಯ ಪರಿಕಲ್ಪನೆಯೆ ಬದಲಾಗಿರುವುದರಿಂದ ಭಾರತೀಯ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಕಾಣ ಬಹುದಾಗಿದ್ದ ಭಾವ ತೀವ್ರತೆಯ ದೃಶ್ಯಗಳಿಗೂ ಈಗ ಕೊರತೆ ಬಂದಿದೆ. ಸನ್ನಿವೇಶಗಳ ಕಾಲಾ ನುಕ್ರಮಣಿಕೆ, ಕಾರ್ಯಕಾರಣ ಸಂಬಂಧಗಳಲ್ಲೂ ಬದಲಾವಣೆ ಬಂದಿದೆ. ಇಂತಹುದೇ ಸಂದೇಶ ನೀಡಬೇಕು ಎಂಬ ಸಿದ್ಧ ಮಾದರಿಗಳನ್ನು ಮಾತ್ರ ನಾವು ಈಗಿನ ಚಿತ್ರಗಳಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.

ಜಸ್ವಂತ್ ಜಾಧವ್ ಗೋಷ್ಠಿಯನ್ನು ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT