ADVERTISEMENT

ಎನ್‍ಎಚ್ ಚತುಷ್ಪಥ: ರೈತರಿಗೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 29 ಮೇ 2017, 5:45 IST
Last Updated 29 ಮೇ 2017, 5:45 IST

ತಿಪಟೂರು: ‘ರಾಷ್ಟ್ರೀಯ ಹೆದ್ದಾರಿ 206ನ್ನು ಚತುಷ್ಪಥ ರಸ್ತೆಯಾಗಿ ಪರಿವರ್ತಿಸಲು ಸ್ವಾಧೀನ ಮಾಡಿಕೊಳ್ಳುವ ರೈತರ ಜಮೀನಿಗೆ ನ್ಯಾಯಯುತ ಬೆಲೆ ದೊರಕುತ್ತದೆ’ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಭರವಸೆ ನೀಡಿದರು.

ನಗರದ ಉಪವಿಭಾಗಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಚತುಷ್ಪಥ ರಸ್ತೆ ನಿರ್ಮಾಣದ ಪ್ರಗತಿ ಹಾಗೂ ಭೂಸ್ವಾಧೀನದ ಬಗ್ಗೆ ಚರ್ಚಿಸಲು ಅಧಿಕಾರಿಗಳು ಹಾಗೂ ರೈತರೊಂದಿಗೆ ಈಚೆಗೆ ನಡೆದ ಸಂವಾದ ಸಭೆಯಲ್ಲಿ ಮಾತನಾಡಿದರು.

ವಿಶೇಷ ಭೂ ಸ್ವಾಧೀನ ಅಧಿಕಾರಿ ಮಹೇಶ್ ಬಾಬು ಮಾತನಾಡಿ, ‘ಕಾಮಗಾರಿಯನ್ನು 4 ಹಂತದಲ್ಲಿ ಕೈಗೊಳ್ಳಲಾಗುವುದು. ದೊಡ್ಡಗುಣಿಯಿಂದ ತಿಪಟೂರು ತಾಲ್ಲೂಕು ಕೊನೆಹಳ್ಳಿಯವರಗೆ ಎರಡನೇ ಹಂತದಲ್ಲಿ 45-95 ಕಿ.ಮೀಗೆ ಒಟ್ಟು 1152 ಎಕರೆಯಷ್ಟು ಭೂ ಸ್ವಾಧೀನ ಪಡಿಸಿಕೊಳ್ಳಲಾಗುವುದು.

ADVERTISEMENT

ಅದರಲ್ಲಿ ಹುಚ್ಚಗೊಂಡನಹಳ್ಳಿಯಿಂದ ಮಾದಿಹಳ್ಳಿವರೆಗೆ 11.5 ಕಿಮೀ ಬೈಪಾಸ್ ರಸ್ತೆಯಾಗುತ್ತಿದೆ. ಇದಕ್ಕೆ ಒಟ್ಟು 320 ಎಕರೆ ಭೂಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ. 3ಎ ನೋಟಿಫಿಕೇಷನ್  ಕಳುಹಿಸಿದ್ದು, ಅನುಮೋದನೆಗಾಗಿ ಬರಬೇಕಿದೆ. 2ನೇ ಹಂತದ ಕಾಮಗಾರಿಯನ್ನು ಜೂನ್‌ 15ರಿಂದ ಪ್ರಾರಂಭಿಸುವುದಾಗಿ’ ತಿಳಿಸಿದರು.

ಶಾಸಕ ಕೆ.ಷಡಕ್ಷರಿ ಮಾತನಾಡಿ, ‘ಶೀಘ್ರವಾಗಿ ರೈತರಿಗೆ ಹೆಚ್ಚಿನ ಮೊತ್ತದಲ್ಲಿಯೇ ಹಣ ಸಂದಾಯವಾಗಬೇಕಿದೆ. ಈ ಬಗ್ಗೆ ಅಧಿಕಾರಿಗಳು ಜಾಗ್ರತೆ ವಹಿಸಿ ಕಾರ್ಯನಿರ್ವಹಿಸಬೇಕು’ ಎಂದರು.

ಉಪವಿಭಾಗಾಧಿಕಾರಿ ಆರ್.ಶಿಲ್ಪಾ, ತಹಶೀಲ್ದಾರ್ ಮಂಜುನಾಥ್, ಎನ್.ಎಚ್.ಅಥಾರಿಟಿಯ ಎಂಜಿನಿಯರ್ ಅಮೃತಾ, ತಾ.ಪಂ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಶಂಕರ್, ರೈತರಾದ ಯೋಗೀಶ್, ಎ.ಟಿ.ಪ್ರಸಾದ್, ಶಿವಶಂಕರ್, ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.