ಹೊಸಕೆರೆ: 'ಸರ್ಕಾರದಿಂದ ಕುಡಿಯುವ ನೀರಿಗಾಗಿ ಸರ್ಕಾರದಿಂದಲೇ ಮಂಜೂರಾಗಿರುವಂತಹ ಕೆರೆಗಳಿಗೆ ನೀರು ಹರಿಸಲು ವಿದ್ಯುತ್ ಕೊಡಿ, ಇಲ್ಲವಾದರೆ ನಾವು ಮುಷ್ಕರ ಕೈಬಿಡುವುದಿಲ್ಲ' ಎಂದು ಹೊಸಕೆರೆ ಕರ್ನಾಟಕ ವಿದ್ಯುತ್ ಪ್ರಸರಣದ ಉಪಸ್ಥಾವರದ ಮುಂದೆ ಹತ್ತಾರು ಹಳ್ಳಿಯ ರೈತರು ಮುಷ್ಕರಕ್ಕೆ ಕುಳಿತರು.
ಹೊಸಕೆರೆ ಬೆಸ್ಕಾಂ ಬಳಿ ದಿಢೀರನೆ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಸೋಮಲಾಪುರ, ಹಿಡಕನಹಳ್ಳಿ, ಬೆಟ್ಟದಹಳ್ಳಿ, ಶಿವನೇಹಳ್ಳಿ, ಅರೇಹಳ್ಳಿ, ಮತ್ತೀಕೆರೆ, ಜಕ್ಕನಹಳ್ಳಿ, ಹೊಸಕೆರೆ, ಅಳಿಲುಘಟ್ಟದಿಂದ ಬಂದಿದ್ದ ರೈತರು, ‘ವಿದ್ಯುತ್ ನೀಡುವಲ್ಲಿ ಬೆಸ್ಕಾಂ ನವರು ತಾರತಮ್ಯ ನಿಲ್ಲಿಸಬೇಕು, ಎಲ್ಲಾಕಡೆ ವಿದ್ಯುತ್ ನೀಡುವಂತೆ ಹೊಸಹಳ್ಳಿ, ಶಿವನೇಹಳ್ಳಿ, ಮತ್ತೀಕೆರೆ ಗ್ರಾಮಗಳಿಗೇಕೆ ನೀಡುತ್ತಿಲ್ಲ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸಮಸ್ಯೆ ಬಗೆಹರಿಸುವವರೆಗೂ ಮುಷ್ಕರ ಕೈಬಿಡುವುದಿಲ್ಲ’ ಎಂದು ಸಂಜೆ 6 ವರಗೆ ಅಲ್ಲೇ ಕುಳಿತು ಧರಣಿ ನಡೆಸಿದರು.
ಸ್ಥಳಕ್ಕೆ ಎಂಜಿನಿಯರ್ ರಂಗಸ್ವಾಮಿ ಭೇಟಿ ನೀಡುತ್ತಿದ್ದಂತೆ ತಮ್ಮ ಅಹವಾಲನ್ನು ಅವರಿಗೆ ಸಲ್ಲಿಸಿದರು. ರಂಗಸ್ವಾಮಿ ಮಾತನಾಡಿ, ‘ದಿನದಲ್ಲಿ ಬೆಳಿಗ್ಗೆ 2 ಗಂಟೆ, ಸಂಜೆ 4 ಗಂಟೆ ವಿದ್ಯುತ್ ನೀಡುತ್ತೇವೆ’ ಎಂದು ಹೇಳಿದರು. ಇದಕ್ಕೆ ಒಪ್ಪದ ರೈತರನ್ನು ತಹಸೀಲ್ದಾರ್ ಅವರ ಬಳಿ ಮಾತನಾಡುವಂತೆ ಹೇಳಿದರು.
ರೈತರು ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡುವವರೆಗೂ ಮುಷ್ಕರ ಕೈಬಿಡುವುದಿಲ್ಲವೆಂದು ತಡರಾತ್ರಿಯವರೆಗೂ ಪಟ್ಟುಹಿಡಿದು ಕುಳಿತಿದ್ದರು. ಶಿರಾ ಡಿವೈಎಸ್ಪಿ ವೆಂಕಟೇಶನಾಯ್ಡು, ಪಿಎಸ್ಐ ನಧಾಪ್, ಗಂಗಾಧರ್, ಎಇಇ ರಂಗಸ್ವಾಮಿ, ಬೆಸ್ಕಾಂ ಅಧಿಕಾರಿ ಸೋಮಶೇಖರ್ ನಾಡತಹಸೀಲ್ದಾರ್ ಕಲ್ಲೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.