ADVERTISEMENT

ಭಗೀರಥರ ಆದರ್ಶ ಮೈಗೂಡಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 23 ಮೇ 2017, 4:35 IST
Last Updated 23 ಮೇ 2017, 4:35 IST

ಹುಳಿಯಾರು: ‘ದೇವಲೋಕದಿಂದ ಭೂಮಿಗೆ ನೀರು ತಂದ ಭಗೀರಥ ಮಹರ್ಷಿಯ  ಆದರ್ಶಗಳನ್ನು ಉಪ್ಪಾರ ಸಮಾಜದವರು ಮೈಗೂಡಿಸಿಕೊಳ್ಳಬೇಕು. ಇತರ ಸಮುದಾಯಗಳ ಜೊತೆ ಉತ್ತಮ ಬಾಂಧವ್ಯ ಹೊಂದಬೇಕು’ ಎಂದು ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಲಹೆ ನೀಡಿದರು.

ಪಟ್ಟಣದ ಎಂಪಿಎಸ್ ಶಾಲಾ ಆವರಣದಲ್ಲಿ ತಾಲ್ಲೂಕು ಭಗೀರಥ ಉಪ್ಪಾರ ಸಂಘ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಹಾಗೂ ಭಗೀರಥ ಭವನ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ದೇವ ಋಣ, ತಂದೆ ತಾಯಿ ಋಣ ಹಾಗೂ ಸಮಾಜದ ಋಣವನ್ನು ತೀರಿಸಿದವರು ಮಾತ್ರ ಉತ್ತಮರು ಎನಿಸಿಕೊಳ್ಳುತ್ತಾರೆ. ದಾನ ಧರ್ಮ ಮಾಡುವ ಮೂಲಕ, ನಿರ್ಗತಿಕರಿಗೆ ಜ್ಞಾನಾರ್ಜನೆ ಅವಕಾಶ ದೊರೆಕಿಸಿ ಕೊಡುವ ಮೂಲಕ ಸಮಾಜದ ಋಣವನ್ನು ತೀರಿಸಬಹುದು’ ಎಂದು ಹೇಳಿದರು.

ADVERTISEMENT

ಸಮಾರಂಭ ಉದ್ಘಾಟಿಸಿದ ಸಚಿವ ಟಿ.ಬಿ.ಜಯಚಂದ್ರ, ‘ಭಗೀರಥ ಶಿವನ ಕುರಿತು ದೀರ್ಘ ತಪಸ್ಸು ಮಾಡಿ ನೀರು ತಂದ ಎಂಬ ನಂಬಿಕೆಯಿದೆ. ಈಗ ನಾವೆಲ್ಲರೂ ಮಳೆಯ ನೀರು ಇಂಗಿಸಿ ಅಂತರ್ಜಲ ಹೆಚ್ಚಿಸಬೇಕು. ನಾವು ಆಧುನಿಕ ಭಗೀರಥರಾಗುವ ಕಾಲ ಬಂದಿದೆ’ ಎಂದರು.

ರಾಜ್ಯ ಉಪ್ಪಾರ ಸಂಘದ ಉಪಾಧ್ಯಕ್ಷ ಕಲ್ಲೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ನ್ಯಾಯಾಧೀಶ ಬಿಲ್ಲಪ್ಪ ಭಗೀರಥರ ಭಾವಚಿತ್ರ ಅನಾವರಣಗೊಳಿಸಿದರು.  
ಸಂಘದ ಪ್ರಧಾನ ಕಾರ್ಯದರ್ಶಿ ವೆಂಕೋಬ, ಬಿಜೆಪಿ ಮುಖಂಡ ಕೆ.ಎಸ್.ಕಿರಣ್ ಕುಮಾರ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಸಂರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್.ರಾಮಚಂದ್ರಯ್ಯ, ಮಂಜುಳಾ, ತಾಲ್ಲೂಕು ಉಪ್ಪಾರ ಸಂಘದ ಉಪಾಧ್ಯಕ್ಷ ನಂದೀಹಳ್ಳಿ ಮಲ್ಲೇಶಯ್ಯ, ಭಗೀರಥ ನೌಕರ ಸಂಘದ ಅಧ್ಯಕ್ಷ ನಾಗೇಂದ್ರಪ್ಪ, ಹೊಸಹಳ್ಳಿ ಜಯಣ್ಣ, ಕಲ್ಲೇನಹಳ್ಳಿ ಶಿವಣ್ಣ, ಜಗದೀಶ್, ಬಳ್ಳೆಕಟ್ಟೆ ರಂಗಸ್ವಾಮಿ, ಹೊಸಹಳ್ಳಿ ರಾಜಣ್ಣ, ಶಿವಯ್ಯ, ಉಪ್ಪಾರ ಯುವ ವೇದಿಕೆ ಅಧ್ಯಕ್ಷ ಟಿ.ಜೆ.ಗುರುಪ್ರಸಾದ್ ವೇದಿಕೆಯಲ್ಲಿದ್ದರು.ಪಟ್ಟಣದಲ್ಲಿ ಭಗೀರಥ ಅವರ ಭಾವಚಿತ್ರ ಮೆರವಣಿಗೆ ನಡೆಯಿತು.

ಉಪ್ಪಾರ ಸಮುದಾಯ ಮರೆಯಲಾರೆ
‘ಕಳ್ಳಂಬೆಳ್ಳ ಕ್ಷೇತ್ರದಿಂದ ನಾನು ಶಿರಾಕ್ಕೆ ತೆರಳಿದ ನಂತರ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಉಪ್ಪಾರ ಸಮಾಜದವರನ್ನು ಶಾಸಕರಾಗಿಸುವ ಬಯಕೆ ಇತ್ತು. ಆದರೆ ಕಾರಣಾಂತರದಿಂದ ಸಾಧ್ಯವಾಗಲಿಲ್ಲ.

40 ವರ್ಷಗಳ ಹಿಂದೆ ನನ್ನ ರಾಜಕೀಯ ಪ್ರವೇಶಕ್ಕೆ ಉಪ್ಪಾರ ಸಮಾಜದ ವರದಪ್ಪ, ಹೊನ್ನಪ್ಪ ಹಾಗೂ ಗೂಬೆಹಳ್ಳಿ ಸಿದ್ದೇಗೌಡ ಮೂಲ ಕಾರಣರಾಗಿದ್ದಾರೆ. ಅವರನ್ನು ಸಾಯುವವರೆಗೂ ಮರೆಯಲಾರೆ’ ಎಂದು ಜಯಚಂದ್ರ ಹೇಳಿದರು.

‘ನೀರಿನ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದಾಗ ಜಯಚಂದ್ರ ನಾಟಕ ಆಡುತ್ತಿದ್ದಾನೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ ಭದ್ರಾ ಯೋಜನೆಯ ತುಮಕೂರು ಉಪ ನಾಲೆ ಕಾರ್ಯ ನಡೆಯುತ್ತಿದೆ. ಮುಂದೆ ಭಗೀರಥ ಮಹರ್ಷಿಯ ಆಶೀರ್ವಾದ ಬೇಕು ಅಷ್ಟೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.