ತುಮಕೂರು: ಮಧುಗಿರಿ– ತುಮಕೂರು– ಮಳವಳ್ಳಿ ಸಂಪರ್ಕಿಸುವ 193 ಕಿ.ಮೀ ಉದ್ದದ ಕೆ–ಶಿಫ್ ಹೆದ್ದಾರಿ ಕಾಮಗಾರಿಯನ್ನು ₨ 500 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಬುಧವಾರ ತಿಳಿಸಿದರು.
ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆ ವಿಭಾಗೀಯ ಕಚೇರಿ ಹಾಗೂ ಕೊಡಿಗೇನಹಳ್ಳಿಯಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಗೆ ರಾಜ್ಯ ಹೆದ್ದಾರಿ, ಕೆ–ಶಿಫ್, ಎಸ್ಇಪಿ, ಟಿಎಸ್ಪಿ ಯೋಜನೆಗಳಿಗಾಗಿ ₨ 400 ಕೋಟಿ ಬಿಡುಗಡೆ ಮಾಡಲಾಗಿದೆ. ಎತ್ತಿನಹೊಳೆ ಯೋಜನೆಯಿಂದ ಮಧುಗಿರಿ ತಾಲ್ಲೂಕಿನ 45 ಕೆರೆ ತುಂಬಿಸಲು ಮತ್ತು ಕುಡಿಯುವ ನೀರಿಗಾಗಿ 1.5 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ ಎಂದರು.
ಜಿಲ್ಲಾ ಕೇಂದ್ರದಿಂದ ಮಧುಗಿರಿ ಮೂಲಕ ಆಂಧ್ರಪ್ರದೇಶದ ಹಿಂದೂಪುರವನ್ನು ಸಂಪರ್ಕಿಸುವ ಕೊಡಿಗೇನಹಳ್ಳಿ ಬಳಿಯ ಪ್ರಮುಖ ರಸ್ತೆಯಾದ ದೊಡ್ಡಮಾಲೂರು ಕೆರೆ ಏರಿ ಅಗಲೀಕರಣ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ₨ 4 ಕೋಟಿ ಬಿಡುಗಡೆ ಮಾಡಲಾಗಿದೆ. ಏರಿಯನ್ನು 4 ಮೀಟರ್ನಿಂದ 7 ಮೀಟರ್ಗೆ ವಿಸ್ತರಿಸಲಾಗುವುದು ಮತ್ತು ರಕ್ಷಣಾ ತಡೆಗೋಡೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ 4ರಿಂದ ಮುದ್ದೇನಹಳ್ಳಿ ಸೇರುವ ರಸ್ತೆ ಅಭಿವೃದ್ಧಿಗೆ ₨ 4.95 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಮಧುಗಿರಿ ತಾಲ್ಲೂಕಿನ ಚಿಕ್ಕಮಾಳೂರು ಗ್ರಾಮಕ್ಕೆ ಪಶುವೈದ್ಯ ಘಟಕ, ಕೆರೆಯೂರು ಮತ್ತು ಮರುವೇಕೆರೆಗೆ 2 ಪಶು ಆಸ್ಪತ್ರೆಗಳನ್ನು ಮಂಜೂರು ಮಾಡಲಾಗಿದೆ ಎಂದರು.
ಅಕ್ರಮ ಮರಳು ಸಾಗಾಟದಿಂದ ಜಿಲ್ಲೆಯ ರಸ್ತೆಗಳು ಹಾಳಾಗಿದ್ದು, ರಸ್ತೆಗಳ ದುರಸ್ತಿಗೆ ಅನುದಾನ ನೀಡುವಂತೆ ಸಚಿವ ಡಾ.ಮಹದೇವಪ್ಪ ಅವರಿಗೆ ಮನವಿ ಮಾಡಿದರು.
ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಸ್ಮಾರ್ಟ್ ಸಿಟಿಯಂತಹ ಮಹತ್ವಾಕಾಂಕ್ಷಿ ಯೋಜನೆಗಳು ಜಿಲ್ಲೆಗೆ ಮಂಜೂರಾಗುತ್ತಿರುವ ಹಿನ್ನಲೆಯಲ್ಲಿ ಮುಂದಿನ 5 ವರ್ಷದಲ್ಲಿ ಜಿಲ್ಲೆಯ ಚಿತ್ರಣವೇ ಸಂಪೂರ್ಣವಾಗಿ ಬದಲಾಗಲಿದೆ. ಅವಕಾಶಗಳನ್ನು ಜಿಲ್ಲೆಯ ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ಮಧುಗಿರಿ ಉಪವಿಭಾಗದ ಅಭಿವೃದ್ಧಿಗಾಗಿ ಪ್ರತ್ಯೇಕ ಲೋಕೋಪಯೋಗಿ ಇಲಾಖೆ ವಿಭಾಗ ಕಚೇರಿ ಪ್ರಾರಂಭಿಸಲಾಗಿದೆ. ಕೊರಟಗೆರೆ, ಶಿರಾ ಮತ್ತು ಪಾವಗಡ ಉಪವಿಭಾಗಗಳು ಸೇರ್ಪಡೆಗೊಂಡಿವೆ ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಚಿಕ್ಕರಾಯಪ್ಪ, ಮುಖ್ಯ ಎಂಜಿನಿಯರ್ ತ್ಯಾಗರಾಜ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.