ADVERTISEMENT

ಮುಂದಿನ ವರ್ಷದಿಂದ ಸ್ನಾತಕೋತ್ತರ ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 11:09 IST
Last Updated 19 ಜುಲೈ 2017, 11:09 IST

ಶಿರಾ: ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಮುಂದಿನ ವರ್ಷದಿಂದ ನಗರದಲ್ಲಿ ಆರಂಭಗೊಳ್ಳಲಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು. ನಗರದ ಹೊರವಲಯದ ಭೂವನಹಳ್ಳಿ ಸಮೀಪ ಮಂಗಳವಾರ  ಸ್ನಾತಕೋತ್ತರ ಕೇಂದ್ರದ ನೀಲ ನಕ್ಷೆ ಪರಿಶೀಲಿಸಿ ಅವರು ಮಾತನಾಡಿದರು.

‘25 ಎಕರೆ ಜಮೀನು ನೀಡಲಾಗಿದೆ.  ಬಿಕಾಂ, ಎಂಕಾಂ, ಬಿಬಿಎಂ, ಎಂಬಿಎ ತರಗತಿಗಳನ್ನು ಪ್ರಾರಂಭಿಸಬೇಕು. ಅಗತ್ಯವಿದ್ದರೆ ಇನ್ನೂ ಹೆಚ್ಚಿನ ಭೂಮಿ ನೀಡಲಾಗುವುದು’ ಎಂದರು.

ತುಮಕೂರು ಹೊರತುಪಡಿಸಿದರೆ ಜಿಲ್ಲೆಯಲ್ಲಿ ಶಿರಾ ಅತಿವೇಗವಾಗಿ ಅಭಿವೃದ್ಧಿಯಾಗುತ್ತದೆ. ಶಿರಾ ಮೂಲಕ ಬೆಂಗಳೂರು- ಮುಂಬೈ ಹಾಗೂ ಬೆಂಗಳೂರು- ಚೆನ್ನೈ ಕೈಗಾರಿಕಾ ಕಾರಿಡಾರ್ ಹಾದು ಹೋಗುತ್ತಿದೆ. ಈಗ ಬೆಂಗಳೂರು- ಚೆನ್ನೈ ಕೈಗಾರಿಕಾ ಕಾರಿಡಾರ್ ಚಿತ್ರದುರ್ಗದ ವರೆಗೆ ವಿಸ್ತರಿಸಲಾಗಿದೆ. ಇದರಿಂದಾಗಿ ತುಮಕೂರು ಜಿಲ್ಲೆಗೆ ಸುಮಾರು ₹ 50 ಸಾವಿರ ಕೋಟಿ  ಬಂಡವಾಳ ಹರಿದು ಬರಲಿದೆ.  ಇದರಲ್ಲಿ ಶೇ 10ರಷ್ಟು ಶಿರಾದಲ್ಲಿ ಹೂಡಿಕೆಯಾಗಲಿದೆ ಎಂದರು.

ADVERTISEMENT

ಜುಂಜಪ್ಪನ ಅಧ್ಯಯನ ಕೇಂದ್ರ:  ಸೂಫಿ ಅಧ್ಯಯನ ಕೇಂದ್ರದ ಮಾದರಿಯಲ್ಲೇ ಜುಂಜಪ್ಪನ ಅಧ್ಯಯನ ಕೇಂದ್ರವನ್ನು ವಿ.ವಿ ಆರಂಭಿಸಬೇಕು ಎಂದು ಸಲಹೆ ನೀಡಿದರು. ಕುಲಪತಿ ಡಾ.ಎ.ಎಚ್‌. ರಾಜಾಸಾಬ್ ಮಾತನಾಡಿ, ‘ಬಿಕಾಂ, ಎಂಕಾಂ, ಬಿಬಿಎಂ, ಎಂಬಿಎ ತರಗತಿಗಳು, ಪ್ರಾಚ್ಯವಸ್ತು ಹಾಗೂ ಇತಿಹಾಸಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನ, ಯೋಗ ಕೇಂದ್ರ ಮತ್ತು ಸೂಫಿ ಅಧ್ಯಯನ ಕೇಂದ್ರ ಪ್ರಾರಂಭಿಸಲಾಗುವುದು. ತಿಪಟೂರಿನಲ್ಲಿ 15 ಎಕರೆ ಜಮೀನು ನೀಡಿದ್ದಾರೆ ಅಲ್ಲಿ ತೆಂಗು ಅಭಿವೃದ್ದಿ ಕೇಂದ್ರವನ್ನು ಪ್ರಾರಂಭಿಸಲಾಗುವುದು’ ಎಂದರು.

‘ಬಿದರಕಟ್ಟೆ ಬಳಿ 240 ಎಕರೆ ಜಾಗವನ್ನು 99 ವರ್ಷಗಳಿಗೆ ಗುತ್ತಿಗೆಗಾಗಿ ನೀಡಲಾಗಿದ್ದು, ಅದನ್ನು ತಪ್ಪಿಸಲು ಹಲವಾರು ಮಂದಿ ಪ್ರಯತ್ನ ನಡೆಸಿದರೂ ಸಹ ಸಚಿವ ಟಿ.ಬಿ.ಜಯಚಂದ್ರ ಅವರು  ಜಾಗ ಕೊಡಿಸಲು ಮಹತ್ವದ ಪಾತ್ರ ವಹಿಸಿದರು’ ಎಂದರು.

ಕುಲಸಚಿವ ವೆಂಕಟೇಶ್ವರಲು, ಉಪ ನಿರ್ದೇಶಕ ನಾಯ್ಕು, ನಗರಸಭೆ ಅಧ್ಯಕ್ಷ ಅಮಾನುಲ್ಲಾ ಖಾನ್, ಎಪಿಎಂಸಿ ಅಧ್ಯಕ್ಷ ಬಿ.ಎಸ್.ಸತ್ಯನಾರಾಯಣ, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ನಾಗರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎಸ್.ರವಿ, ಡಿವೈಎಸ್ಪಿ ವೆಂಕಟೇಶ್ ನಾಯ್ಡು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.