ಉಡುಪಿ: ಶ್ರೀಕೃಷ್ಣನಿಗೆ ಅಧಿಕಾರದ ಆಸೆ ಇರಲಿಲ್ಲ, ಆದ್ದರಿಂದ ತನಗೆ ಸಿಕ್ಕ ಎಲ್ಲ ಅವಕಾಶಗಳನ್ನು ಆತ ತೊರೆದ. ಅಧಿಕಾರದ ಆಸೆಯಿಂದ ದೂರ ಇರುವಂತೆ ಆ ಮೂಲಕ ಆತ ಎಲ್ಲರಿಗೂ ಸಂದೇಶ ನೀಡಿದ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಶ್ರೀಕೃಷ್ಣ ಜನ್ಮಾಷ್ಟಮಿ ಸಂದೇಶ ನೀಡಿದ ಅವರು, ದುಷ್ಟರ ಶಿಕ್ಷೆ ಹಾಗೂ ಶಿಷ್ಟರ ರಕ್ಷಣೆಗಾಗಿ ಆತ ಅವತಾರವೆತ್ತಿದ. ಕಂಸನನ್ನು ಕೊಂದ ನಂತರ ರಾಜ್ಯಾಧಿಕಾರ ವಹಿಸಿಕೊಳ್ಳುವಂತೆ ಉಗ್ರಸೇನ ಮನವಿ ಮಾಡುತ್ತಾನೆ, ಆದರೆ ಅದಕ್ಕೆ ಒಪ್ಪಲಿಲ್ಲ. ಲೋಕಕ್ಕೆ ಕಂಠಕನಾಗಿದ್ದ ಜರಾಸಂಧನ ವಧೆಯ ನಂತರ ಅಧಿಕಾರವನ್ನು ಆತನ ಮಗ ಭಗದತ್ತನಿಗೆ ವಹಿಸಿಕೊಟ್ಟ.
ಜರಾಸಂಧ ಹಾಗೂ ಮಕ್ಕಳಿಗೆ ಕಂಠಕನಾಗಿದ್ದ ಕಂಸವನ್ನು ಕೊಂದ ನಂತರವೂ ಯಾವುದೇ ಆಸೆ– ಅಮಿಷಗಳಿಗೆ ಆತ ಒಳಗಾಗಲಿಲ್ಲ. ಸಾಮಾನ್ಯ ಗೋಪಾಲಕನಾಗಿ ಆತ ಬಾಳಿದ.
ಶ್ರೀಕೃಷ್ಣ ಆದರ್ಶಗಳು ಅನುಕರಣೀಯವಾಗಿವೆ. ದೇವನಾಗಿ, ಆದರ್ಶನ ಮಾನವನಾಗಿ ಬಾಳಿದ ಆತ ಕರ್ತವ್ಯದ ಸಂದೇಶ ನೀಡಿದ ಮಹಾಪುರಷ. ಸ್ವಾರ್ಥರಹಿತವಾಗಿ ಮತ್ತು ಪ್ರಾಮಾಣಿಕವಾಗಿ ಭಗವಂತನ ಸೇವೆ ಮಾಡಬೇಕು ಎಂದು ಆತ ಸಾರಿದ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.