ಕೋಟ(ಬ್ರಹ್ಮಾವರ) : ‘ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯಪೂರಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರ ಜತೆಗೆ ತಮಗೆ ಸಿಗುವ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಸರ್ವಾಂಗೀಣ ಅಭಿವೃದ್ಧಿ ಹೊಂದಬಹುದು’ ಎಂದು ಪ್ರಾಧ್ಯಾಪಕ ನಾಗರಾಜ ವೈದ್ಯ ಹೇಳಿದರು.
ಕೋಟ ಪಡುಕೆರೆ ಲಕ್ಷ್ಮಿ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಪ್ರಥಮ ವರ್ಷದ ವಿದ್ಯಾರ್ಥಿಗಳ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತ ನಾಡಿದರು. ಹಾಜರಾತಿ, ಕ್ರೆಡಿಟ್ ಆಧಾರಿತ ಚತುರ್ಮಾಸ ಪದ್ಧತಿ, ಪರೀಕ್ಷಾ ವಿಧಾನಗಳು ,ವೃತ್ತಿ ಆಧಾರಿತ ಅವಕಾಶಗಳ ಕುರಿತು ಮಾಹಿತಿ ನೀಡಿದರು.
ಉಪನ್ಯಾಸಕ ಮಂಜುನಾಥ ಆಚಾರಿ ಎಳ್ಳಂಪಳ್ಳಿ ಸಮಾಜ ಕಾರ್ಯ ವಿದ್ಯಾರ್ಥಿಗಳಿಗೆ ಸಮಾಜಕಾರ್ಯ ವಿಭಾಗದ ಮೌಲ್ಯಮಾಪನ ವ್ಯವಸ್ಥೆ, ಕ್ಷೇತ್ರ ಅಧ್ಯಯನ ಸಮಾಜಕಾರ್ಯ ಕುರಿತಾದ ಮಾಹಿತಿ ನೀಡಿದರು. ನಾಗರಾಜ ಯು. ಮತ್ತು ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ರವಿಪ್ರಸಾದ ಕೆ. ಜಿ. ಮಾಹಿತಿ ನೀಡಿದರು. ಗ್ರಂಥಪಾಲಕ ಕೃಷ್ಣ ಸಾಸ್ತಾನ ಗ್ರಂಥಾಲಯದ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್. ನಾಯಕ ಅಧ್ಯಕ್ಷತೆ ವಹಿಸಿ, ‘ಉನ್ನತ ಶಿಕ್ಷಣದಲ್ಲಿ ಪಠ್ಯ-ಸಹಪಠ್ಯ ಚಟುವಟಿಕೆ ಜತೆಗೆ ಮಾನವೀಯ ಮೌಲ್ಯ, ಶಿಸ್ತನ್ನು ಅಳವಡಿಸಬೇಕು’ ಎಂದರು. ಉಪನ್ಯಾಸಕರಾದ ಕೃಷ್ಣಮೂರ್ತಿ ವೈ. ಆರ್., ಪ್ರಶಾಂತ ನೀಲಾವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.