ADVERTISEMENT

ಎಸ್ಎಸ್ಎಫ್‌ನಿಂದ ಬಡಕುಟುಂಬಕ್ಕೆ ₹ 8 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2017, 6:42 IST
Last Updated 17 ಡಿಸೆಂಬರ್ 2017, 6:42 IST

ಪಡುಬಿದ್ರಿ: ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬವೊಂದಕ್ಕೆ ₹ 8.5ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮನೆಯೊಂದನ್ನು ಕನ್ನಂಗಾರ್ ಶಾಖೆಯ ಎಸ್ಎಸ್ಎಫ್ ನಿರ್ಮಿಸಿಕೊಟ್ಟಿದ್ದು ಭಾನುವಾರ ಉದ್ಘಾಟನೆಗೊಳ್ಳಲಿದೆ.

ಸುಬಹಿ ನಮಾಝಿನ ಬಳಿಕ ಗೃಹಪ್ರವೇಶ ನಡೆಯಲಿದ್ದು, ಅಲ್ಹಾಜ್ ಮುಹಮ್ಮದ್ ಬಾಖವಿ ಪೂಂಜಲಕಟ್ಟೆ ಉಸ್ತಾದ್ ದುವಾ ನೆರವೇರಿಸಲಿರುವರು ಎಂದು ಎಸ್ಎಸ್ಎಫ್‌ನ ಸದಸ್ಯ ಎಸ್.ಎಚ್.ಎಮ್.ಹನೀಫ್ ಶನಿವಾರ ಕಾಪುವಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಂಜೆ ಮನೆಯ ಕೀಲಿ ಕೈ ಹಸ್ತಾಂತರ ಕಾರ್ಯಕ್ರಮ ನಡೆಯಲಿದ್ದು, ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಅಲ್ಹಾಜ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉದ್ಘಾಟಿಸಲಿದ್ದಾರೆ. ಮನೆ ನಿರ್ಮಾಣ ಸಮಿತಿಯ ಅಧ್ಯಕ್ಷ ಅಬ್ದುಲ್ ಹಮೀದ್ ಇನ್‌ಸ್ಟೈಲ್‌ ಅಧ್ಯಕ್ಷತೆ ವಹಿಸಲಿದ್ದಾರೆ.

ADVERTISEMENT

ಕೇರಳ ರಾಜ್ಯದ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ಆಯೋಗದ ಸದಸ್ಯ ಮುಳ್ಳೂರುಕರ ಮುಹಮ್ಮದ್ ಆಲಿ ಸಖಾಫಿ ಮುಖ್ಯಭಾಷಣ ಮಾಡಲಿದ್ದಾರೆ. ಕನ್ನಂಗಾರ್ ಜುಮ್ಮಾ ಮಸ್ಜಿದ್ ಮುದರ್ರಿಸ್ ಅಲ್ಹಾಜ್ ಅಶ್ರಫ್ ಅಖಾಫಿ ಕಿನ್ಯ, ಶಾಸಕ ವಿನಯಕುಮಾರ್ ಸೊರಕೆ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಊರಿನ ಹಲವು ದಾನಿಗಳ ಸಹಕಾರದಿಂದಿಗೆ ₹ 8.5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಲಾಗಿದೆ. ಎರಡು ಬೆಡ್ ರೂಂ, ಅಡುಗೆ ಕೋಣೆ, ಹಾಲ್, ಡೈನಿಂಗ್ ರೂಂ ಸಹಿತ ಎರಡು ಶೌಚಾಲಯ, ಆವರಣ ಗೋಡೆ ಇದೆ ಎಂದು ಎಸ್ಎಸ್ಎಫ್‌ನ ಸದಸ್ಯ ಎಸ್.ಎಚ್.ಎಮ್.ಹನೀಫ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಸ್ಎಸ್ಎಫ್ನ ರಾಜ್ಯ ಸಮಿತಿ ಸದಸ್ಯ ಸಿರಾಜುದ್ದೀನ್ ಸಖಾಫಿ, ಮನೆ ನಿರ್ಮಾಣ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಇನ್‌ಸ್ಟೈಲ್‌, ಕಾಪು ವಲಯ ಉಪಾಧ್ಯಕ್ಷ ಶಾಹುಲ್ ಹಮೀದ್ ನಈಮಿ, ಪಡುಬಿದ್ರಿ ಸೆಕ್ಟರ್ ಕಾರ್ಯದರ್ಶಿ ಖಲಂದರ್, ಸೆಕ್ಟರ್ ಸದಸ್ಯ ಎಂ.ಎಚ್.ಸಿರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.