ADVERTISEMENT

`ಕನಕದಾಸರ ಚಿಂತನೆ: ಎಲ್ಲಾ ಕಾಲಕ್ಕೂ ಪ್ರಸ್ತುತ'

​ಪ್ರಜಾವಾಣಿ ವಾರ್ತೆ
Published 25 ಜುಲೈ 2013, 9:01 IST
Last Updated 25 ಜುಲೈ 2013, 9:01 IST

ಕುಂದಾಪುರ: ಕನಕದಾಸರು ರಾಜ್ಯ ಕಂಡ ಅಪರೂಪದ ಸಂತ. ಅವರು ಕೇವಲ ಸಂತ ಅಥವಾ ದಾರ್ಶನಿಕರಾಗಿ ಗುರುತಿಸಿಕೊಂಡವರಲ್ಲ, ಎಲ್ಲಾ ಕಾಲಕ್ಕೂ ಪ್ರುಸ್ತುತರಾಗುವಂತೆ ತಮ್ಮ ಚಿಂತನೆಗಳನ್ನು ಬೆಳೆಸಿಕೊಂಡ ಪುಣ್ಯ ಪುರುಷರಾಗಿದ್ದರಿಂದ ಅವರ ಚಿಂತನೆ ಗಳು ಯಾವ ಕಾಲಕ್ಕೂ ಶ್ರೇಷ್ಠ ಎನಿಸಿ ಕೊಳ್ಳುತ್ತದೆ ಎಂದು ಹಂಪಿ ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಎ.ವಿ.ನಾವಡ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಭಂಡಾರ್ಕಾರ್ಸ್‌ ಕಾಲೇಜಿನ ಡಾ.ಎಚ್.ಶಾಂತಾರಾಂ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ ಮತ್ತು ಕನಕದಾಸ ಅಧ್ಯಯನ ಕೇಂದ್ರ ಬೆಂಗಳೂರು ಇವರ ಸಹಯೋಗದಲ್ಲಿ ಬುಧವಾರ ನಡೆದ `ಮುತ್ತು ಬಂದಿದೆ ಕೇರಿಗೆ' ರಸಗ್ರಹಣ ಶಿಬಿರದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ತನ್ನ ಸರಳೀಕೃತ ಬರವಣಿಗೆಗಳಿಂದ ಹಾಗೂ ನುಡಿಗಳಿಂದ ಕಾಲವನ್ನು ಎಚ್ಚರಿಸುವ ಮಹತ್ಕಾರ್ಯವನ್ನು ಅವರು ಮಾಡಿದ್ದರು. ದಾಸ ಸಾಹಿತ್ಯದ ಅಪರೂಪದ ಹರಿಕಾರರಾದ ಅವರು ತಮ್ಮ ಸಾಹಿತ್ಯ ಕೃತಿಗಳಿಂದ ಸಮಾಜ ವನ್ನು ತಿದ್ದುವ ಹಾಗೂ ಸಂಸ್ಕೃರಿಸುವ ಕೆಲಸವನ್ನು ಮಾಡಿದ್ದರು ಎಂದು ಹೇಳಿದರು.

ಕನಕದಾಸರ ಬರವಣಿಗೆಗಳು ಕೇವಲ ಮಧ್ಯಕಾಲಿನ ಕಾಲಕ್ಕೆ ಮಾತ್ರ ಸೀಮಿತವಾಗದೆ ವಿಶಾಲ ವ್ಯಾಪ್ತಿಯನ್ನು ಹೊಂದಿದ್ದು, ಭಕ್ತಿಯ ಸಾಹಿತ್ಯ, ಕೀರ್ತನೆ ಗಳಲ್ಲಿ ಆಧ್ಯಾತ್ಮಕ ಚಿಂತನೆಗಳಿದ್ದರೂ ಸಮುದಾಯದಲ್ಲಿ ಮೇಲುಕೀಳು ಎಂಬ ಭೇದ ಮಾಡದೇ ಎಲ್ಲರೂ ಸಮಾನರು ಎನ್ನುವ ಬದುಕಿನ ಐತಿಹ್ಯಗಳನ್ನು ಸಂಶೋಧಿಸಿದ್ದ ಕನಕದಾಸರ ದಾಸ ಸಾಹಿತ್ಯವನ್ನು ಪ್ರಸರಿಸುವ ಹಾಗೂ ಪ್ರೋತ್ಸಾಹಿಸುವ ಕಾರ್ಯಗಳು ಇನ್ನೂ ಹೆಚ್ಚಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿ ತಾಧಿಕಾರಿ ಡಾ.ಎಚ್. ಶಾಂತಾರಾಂ ಅವರು ಸಾಮಾಜಿಕ ಕಳಕಳಿ ಬರಬೇ ಕಾದರೆ ವ್ಯಕ್ತಿಯ ವ್ಯಕ್ತಿತ್ವ ಮುಖ್ಯ ವಾಗುತ್ತದೆ. ಕೃತಿ, ಕಥೆ ಮತ್ತು ಕೀರ್ತ ನೆಗಳ ಹಿಂದೆ ಇರುವ ನಿಜವಾದ ತತ್ವ ಗಳನ್ನು ಜನ ಸಾಮಾನ್ಯರಿಗೆ ತಿಳಿಸುವ ಹಾಗೂ ಕನಕದಾಸರಂತಹ ಶ್ರೇಷ್ಠ ದಾಸ ಸಾಹಿತ್ಯ ರಚನೆಕಾರರ ರಚನೆಗಳನ್ನು ಉಳಿಸಿ ಬೆಳೆಸುವ ಪ್ರಯತ್ನಗಳು ನಿರಂತರವಾಗಬೇಕು ಎಂದು ಹೇಳಿದರು.

ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿಯ ಕೃಷ್ಣ ಭಟ್ ವೇದಿಕೆ ಯಲ್ಲಿದ್ದರು. ಗಾಯಕಿ ಸಂಗೀತಾ ಬಾಲಚಂದ್ರ ಅವರ ನೇತೃತ್ವದಲ್ಲಿ ಗಾಯನ ಶಿಬಿರ ನಡೆಯಿತು.

ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ಪ್ರೊ.ರೇಖಾ ಬನ್ನಾಡಿ ವಂದಿಸಿದರು. ಉಪನ್ಯಾಸಕ ರಂಜಿತ ಶೆಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.