ಉಡುಪಿ: ಜೇಸಿಐ ಉಡುಪಿ ಇಂದ್ರಾಳಿಯು ಪೇತ್ರಿಯ ಸಮೃದ್ಧಿ ಮಹಿಳಾ ಮಂಡದ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮ ದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐದು ಮಂದಿ ಮಹಿಳೆಯರಿಗೆ ಜೇಸಿ ಪಂಚ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೃಷಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಪೇತ್ರಿಯ ಅನ್ನಪೂರ್ಣ ನರ್ಸರಿಯ ಪ್ರಸನ್ನಾ ಪ್ರಸಾದ್ ಭಟ್ ಅವರಿಗೆ ಕಿಸಾನ್ ರತ್ನ, ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳ ರೂವಾರಿ ಹಾಗೂ ಮಕ್ಕಳನ್ನು ರಾಜ್ಯಮಟ್ಟದ ಸ್ಫರ್ಧೆಗಳಿಗೆ ಅಣಿಗೊಳಿಸುವ ಅಧ್ಯಾಪಕಿ ವನಿತಾ ಶೆಟ್ಟಿ ಅವರಿಗೆ ವಿದ್ಯಾರತ್ನ, ಉದ್ಯಮ ಕ್ಷೇತ್ರದ ಸಾಧಕಿ ಕಸ್ತೂರಿ ಎನ್. ಶೆಟ್ಟಿ ಅವರಿಗೆ ಉದ್ಯಮ ರತ್ನ, ತ್ರೋಬಾಲ್ನಲ್ಲಿ ವಿಶ್ವವಿದ್ಯಾಲಯ,
ರಾಜ್ಯ ಹಾಗೂ ಮುಂಬೈ ತಂಡಗಳನ್ನು ಪ್ರತಿನಿಧಿಸಿದ ಚೇತನಾ ಶೆಟ್ಟಿ ಅವರಿಗೆ ಖೇಲ್ ರತ್ನ ಹಾಗೂ ಸಮಾಜ ಸೇವಕಿ ಎಚ್ಐವಿ ಪೀಡಿತ ಮಹಿಳೆಯರಿಗೆ ಉಚಿತ ಯೋಗ ತರಬೇತಿ ನೀಡುತ್ತಿರುವ ದಮಯಂತಿ ಅವರಿಗೆ ಮಾನವತಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೇಸಿ ಘಟಕದ ಅಧ್ಯಕ್ಷೆ ಘಟಕಾಧ್ಯಕ್ಷೆ ಶೆರ್ಲಿ ಮನೋಜ್ ಅಧ್ಯಕ್ಷತೆ ವಹಿಸಿದ್ದರು.
ಜೇಸಿ ವಲಯ 15ರ ಪ್ರಥಮ ಮಹಿಳೆ ಶೀತಲ್ ಸಂತೋಷ್, ಜೇಸಿಐ ವಲಯ ತರಬೇತುದಾರ ಹಾಗೂ ವಲಯಾಧಿಕಾರಿ ಮನೋಜ್ ಕಡಬ, ಸಮೃದ್ಧಿ ಮಹಿಳಾ ಮಂಡಲದ ಅಧ್ಯಕ್ಷೆ ವಿನಯ ಪಿ. ಶೆಟ್ಟಿ, ಕಾರ್ಯದರ್ಶಿ ವನಿತಾ ಪಿ. ಶೆಟ್ಟಿ, ಉಪಾಧ್ಯಕ್ಷ ಅಶೋಕ್ ಪೂಜಾರಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.