ಉಡುಪಿ: ಅಳೆದು– ತೂಗಿ ಲೆಕ್ಕಾಚಾರ ಹಾಕಿದ ಬಿಜೆಪಿ ಹೈಕಮಾಂಡ್ ಉಡುಪಿ ಮತ್ತು ಕಾಪು ಕ್ಷೇತ್ರದಲ್ಲಿ ಮಾಜಿ ಶಾಸಕರನ್ನೇ ಮತ್ತೊಮ್ಮೆ ಕಣಕ್ಕಿಳಿಸಿದೆ. ಕಾಪುವಿನಿಂದ ಲಾಲಾಜಿ ಮೆಂಡನ್ ಹಾಗೂ ಉಡುಪಿಯಿಂದ ಕೆ. ರಘುಪತಿ ಭಟ್ ಸ್ಪರ್ಧೆ ಮಾಡಲಿದ್ದಾರೆ.
ಉಡುಪಿ ಕ್ಷೇತ್ರದ ಟಿಕೆಟ್ ಬಗ್ಗೆ ಬಹಳಷ್ಟು ಗೊಂದಲ ನಿರ್ಮಾಣವಾಗಿತ್ತು. ಭಟ್ಟರಿಗೆ ಟಿಕೆಟ್ ಕೈತಪ್ಪಲಿದೆ ಎಂಬ ಸುದ್ದಿ ಬಲವಾಗಿತ್ತು. ಆದರೆ ಕ್ಷೇತ್ರದ ಶೇ99ರಷ್ಟು ಕಾರ್ಯಕರ್ತರು ಹಾಗೂ ಮುಖಂಡರ ಬೆಂಬಲ ಇದ್ದ ಕಾರಣ ಹಾಗೂ ಸಮೀಕ್ಷೆಯೂ ಅವರ ಪರವಾಗಿದ್ದ ಕಾರಣ ಮತ್ತೆ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಟಿಕೆಟ್ ತಪ್ಪಿಸಲು ಮುಖಂಡರ ಗುಂಪೊಂದು ಇನ್ನಿಲ್ಲದ ಪ್ರಯತ್ನ ಮಾಡಿದರೂ ಯಶಸ್ಸು ಸಿಕ್ಕಿಲ್ಲ. ಟಿಕೆಟ್ ಗಿಟ್ಟಿಸಿಯೇ ಸಿದ್ಧ ಎಂದು ಹೇಳಿದ್ದ ಭಟ್ಟರು ಯಶಸ್ಸು ಸಾಧಿಸಿದ್ದಾರೆ.
ಹಾಲಿ ಶಾಸಕ ಹಾಗೂ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಅಭ್ಯರ್ಥಿ ಎಂದು ಈಗಾಗಲೇ ಘೋಷಣೆಯಾಗಿರುವುದರಿಂದ ಉಡುಪಿ ಕ್ಷೇತ್ರ ತುರುಸಿನ ಸ್ಪರ್ಧೆಗೆ ಸಾಕ್ಷಿಯಾಗುವ ಸಾಧ್ಯತೆ ಇದೆ.
ಕಾಪು ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿಗೆ ಅವಕಾಶ ಸಿಗಲಿದೆ ಎಂಬ ಊಹೆ ಸಹ ಸುಳ್ಳಾಗಿದೆ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಅಥವಾ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಅವರಿಗೆ ಟಿಕೆಟ್ ಸಿಗಲಿದೆ ಎಂಬ ಸುದ್ದಿ ಇತ್ತು. ಆದರೆ ಪ್ರಯೋಗ ಮಾಡಲು ಇಷ್ಟಪಡದ ಬಿಜೆಪಿ ಅದೇ ಕ್ಷೇತ್ರದಿಂದ ಎರಡು ಬಾರಿ ಗೆಲುವು ಸಾಧಿಸಿ ಕಳೆದ ಚುನಾವಣೆಯಲ್ಲಿ ಸೋತಿದ್ದ ಲಾಲಾಜಿ ಮೆಂಡನ್ ಅವರನ್ನು ಮತ್ತೊಮ್ಮೆ ಕಣಕ್ಕಿಳಿಸಿದೆ. ಕಾಂಗ್ರೆಸ್ ಅಭ್ಯರ್ಥಿ ವಿನಯಕುಮಾರ್ ಸೊರಕೆ ಅವರೊಂದಿಗೆ ಎರಡನೇ ಬಾರಿ ರಾಜಕೀಯ ಕಾದಾಟ ನಡೆಸಲಿದ್ದಾರೆ.
ಕಾಪು ಕ್ಷೇತ್ರದಲ್ಲಿ ಹಲವು ತಿಂಗಳುಗಳಿಂದ ಸೊರಕೆ ಪ್ರಚಾರ ನಡೆಸುತ್ತಿದ್ದಾರೆ. ಅಭ್ಯರ್ಥಿ ಘೋಷಣೆಯಾಗದಿದ್ದರೂ ಬಿಜೆಪಿ ಸಹ ಸಂಘ
ಟನೆಯಲ್ಲಿ ತೊಡಗಿತ್ತು. ಹಳೆಯ ಎದುರಾಳಿಗಳೇ ಮತ್ತೊಮ್ಮೆ ಗೆಲುವಿಗೆ ಸೆಣಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.