ADVERTISEMENT

‘ಬಿಜೆಪಿಗೆ ಹೆದರಿ ಯೋಜನೆ ಕೈಬಿಟ್ಟಿಲ್ಲ’

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 6:19 IST
Last Updated 4 ಮಾರ್ಚ್ 2017, 6:19 IST

ಉಡುಪಿ: ಜನರನ್ನು ತಪ್ಪುದಾರಿ ಗೆಳೆಯುವ ಪ್ರಯತ್ನವನ್ನು ಬಿಜೆಪಿ ನಿರಂತರ ವಾಗಿ ಮಾಡಿಕೊಂಡು ಬಂದಿದೆ. ಈಗ ಸ್ಟೀಲ್‌ ಬ್ರಿಡ್ಜ್‌ ಯೋಜನೆ ಯನ್ನು ವಿರೋಧಿಸುವ ಮೂಲಕ ಅಭಿವೃದ್ಧಿಯ ವಿರುದ್ಧವಾಗಿದ್ದೇವೆ ಎಂದು ಜನರಿಗೆ ತೋರಿಸಿಕೊಟ್ಟಿದ್ದಾರೆ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿಸೋಜ ಹೇಳಿದರು.

ಶುಕ್ರವಾರ ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತ ನಾಡಿದ ಅವರು, ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿದ ಉಕ್ಕಿನ ಸೇತುವೆ (ಸ್ಟೀಲ್‌ ಬ್ರಿಡ್ಜ್‌) ಯೋಜನೆ ಯನ್ನು ಸರ್ಕಾರ ಕೈಬಿಟ್ಟಿದ್ದು ಬಿಜೆಪಿಗೆ ಹೆದರಿಯೂ ಅಲ್ಲ. ಭ್ರಷ್ಟಾಚಾರ ಆಗಿದೆ ಎಂಬ ಕಾರಣಕ್ಕೂ ಅಲ್ಲ. ನಾವು ಜನರ ಪರವಾಗಿ ಇರುವವರು, ಅಭಿವೃದ್ಧಿ ಪರವಾಗಿ ಕೆಲಸ ಮಾಡುವವರು.

ಬಿಜೆಪಿಯವರು ಒಳ್ಳೆಯ ಕೆಲಸವನ್ನು ಮಾಡುವಾಗ ಅಡ್ಡ ಬಂದು, ಅದರಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಜನರ ಬಳಿ ಹೋಗಲು ಮುಂದಾದರು. ಹಾಗಾದರೆ, ಜನರಿಗೆ ಬೇಡವಾದ ಯೋಜನೆ, ಸರ್ಕಾರಕ್ಕೆ ಯಾಕೆ ಬೇಕು. ಜನರ ಅನುಕೂಲಕ್ಕಾಗಿ ಯೋಜನೆಯನ್ನು ಸಿದ್ಧಪಡಿಸಲಾಗಿತ್ತು. ಅದರಲ್ಲಿ ಭ್ರಷ್ಟಾಚಾ ರದ ಮೂಲವನ್ನು ನೋಡುವುದಾದರೆ, ಅಂಥಾ ಯೋಜನೆ ಬೇಡವೆಂದು ತೀರ್ಮಾನಿಸಿದ್ದೇವೆ ಎಂದರು.

ಬೆಂಗಳೂರು ನಗರದಲ್ಲಿ ದಿನೇ ದಿನೇ ಸಂಚಾರ ದಟ್ಟನೆ ಹೆಚ್ಚಾಗುತ್ತಿದ್ದು, ಇದರಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಜನರು ಪಡುವ ತೊಂದರೆಯನ್ನು ತಗ್ಗಿಸುವ ನಿಟ್ಟಿನಿಂದ ಹಾಗೂ ಸಂಚಾರಿ ವ್ಯವಸ್ಥೆಯನ್ನು ಸುಗಮಗೊಳಿಸುವ ಸಲುವಾಗಿ ಸರ್ಕಾರವು ಸ್ಟೀಲ್‌ ಬ್ರಿಡ್ಜ್‌ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಇದು ಬಿಜೆಪಿಯ ಅವಧಿಯಲ್ಲಿಯೇ ಪ್ರಸ್ತಾಪಿಸಲಾದ ಯೋಜನೆ. ಆದರೆ, ಅದನ್ನು ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿತ್ತು ಅಷ್ಟೇ ಎಂದು ಹೇಳಿದರು.

ಸಚಿವ ಯು.ಟಿ. ಖಾದರ್‌ ಅವರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯು.ಟಿ. ಖಾದರ್‌ ಅವರು ಅಂತಹ ಹೇಳಿಕೆ ನೀಡಿರುವುದು ಸರಿಯಲ್ಲ. ಅಂತಹ ಮಾತನ್ನು ಅವರು ಆಡಬಾರದಿತ್ತು. ಅವರಿಗೂ ತಪ್ಪಿನ ಅರಿವಾಗಿದೆ. ಇದು ಆಕಸ್ಮಿಕವಾಗಿ ಬಂದದ್ದು, ಉದ್ದೇಶಪೂರ್ವಕವಾಗಿ ಹೇಳಿಕೆ ನೀಡಿಲ್ಲ ಎಂದು ತಿಳಿಸಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.