ADVERTISEMENT

ಮಕ್ಕಳಿಗೂ ಶಿಕ್ಷಣ ನೀಡುವುದು ಸಮಾಜದ ಹೊಣೆ: ತೊರವಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 6:02 IST
Last Updated 29 ಆಗಸ್ಟ್ 2016, 6:02 IST

ಉಡುಪಿ: ಸಾಮಾಜಿಕ ಜವಾಬ್ದಾರಿ ಇಲ್ಲದೆ ಹೊಸ ಸಮಾಜದ ನಿರ್ಮಾಣ ಅಸಾಧ್ಯ ಎಂದು ಮಕ್ಕಳ ಹಕ್ಕು ರಕ್ಷಣಾ ಆಯೋಗದ ಸದಸ್ಯೆ ವನಿತಾ ತೊರವಿ ಹೇಳಿದರು.ಮಲ್ಪೆಯ ಮೀನುಗಾರ ಸಂಘದಲ್ಲಿ ಇತ್ತೀಚೆಗೆ ನಡೆದ ‘ಶಾಲೆ ಕಡೆ ನನ್ನ ನಡೆ’ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾ ಡಿದರು. ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಹಾಗೂ ಎಲ್ಲ ಮಕ್ಕಳಿಗೂ ಶಿಕ್ಷಣ ನೀಡುವ ಹೊಣೆ ಸಮಾಜದ್ದಾಗಿದೆ ಎಂದರು.

ಮಲ್ಪೆ ಬಂದರಿನಲ್ಲಿ ಯಾರೂ ಬಾಲಕಾರ್ಮಿಕರಿಂದ ದುಡಿಸಿಕೊಳ್ಳು ತ್ತಿಲ್ಲ. ಮೀನುಗಳನ್ನು ಹೆಕ್ಕಿ ಮಾರಾಟ ಮಾಡಲು ಇಲ್ಲಿ ಮಕ್ಕಳು ಬರುತ್ತಾರೆಯೇ ವಿನಾ ಇಲ್ಲಿ ಮಕ್ಕಳಿಗೆ ದುಡಿಯಲು ಅವಕಾಶವಿಲ್ಲ ಎಂದು ಮೀನುಗಾರ ಮುಖಂಡರು ಮಾಹಿತಿ ನೀಡಿದರು.

ವಲಸೆ ಕಾರ್ಮಿಕರ ಮಕ್ಕಳು ಮೀನು ಗಳನ್ನು ಹೆಕ್ಕಿ ಮಾರಾಟ ಮಾಡುವ ಕೆಲಸವನ್ನು ತಡೆಯಲು ಹಾಗೂ ಮಕ್ಕಳು ಈ ಪ್ರದೇಶಕ್ಕೆ ಸುಳಿಯದಂತೆ ಕಠಿಣ ಕಾನೂನು ಕ್ರಮವನ್ನು ಅನುಷ್ಠಾನಕ್ಕೆ ತರಬೇಕಾದ ಅಗತ್ಯವಿದೆ. ವಲಸೆ ಕಾರ್ಮಿ ಕರೇ ತಮ್ಮ ಮಕ್ಕಳನ್ನು ಇಂತಹ ಕೆಲಸಕ್ಕೆ ಬಳಸುತ್ತಿದ್ದು, ಮೀನುಗಾರಿಕೆ, ಶಿಕ್ಷಣ, ಕಾರ್ಮಿಕ, ಪೊಲೀಸ್‌ ಇಲಾಖೆ ಹಾಗೂ ಮೀನುಗಾರರ ಸಂಘಟನೆಗಳ ಸಹಕಾರ ದಿಂದ ನಿರಂತರವಾಗಿ ಕಾರ್ಯಾಚರಣೆ ಮಾಡಿದರೆ ಮಾತ್ರ ಮಕ್ಕಳು ಈ ಪ್ರದೇಶ ವ್ಯಾಪ್ತಿಯಲ್ಲಿ ಸುಳಿಯದಂತೆ ತಡೆಯಲು ಸಾಧ್ಯ ಎಂದು ಮೀನುಗಾರ ಮುಖಂಡರು ಅಭಿಪ್ರಾಯಪಟ್ಟರು.

ಮಲ್ಪೆ ಮೀನುಗಾರಿಕಾ ಬಂದರಿಗೆ ಬಂದು ಮೀನು ಹೆಕ್ಕಿ ಮಾರುವ ಮಕ್ಕಳ ಕಾರ್ಯಚಟುವಟಿಕೆ ತಡೆಯಲು ತಮ್ಮ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು  ವನಿತಾ ತೊರವಿ ಭರವಸೆ ನೀಡಿದರು.

ಜಿಲ್ಲಾ ಸಿವಿಲ್‌ ನ್ಯಾಯಾಧೀಶೆ ಲತಾ, ಕಾರ್ಮಿಕ ಅಧಿಕಾರಿ ಎನ್‌.ಪಿ. ವಿಶ್ವನಾಥ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್‌, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದಿವಾಕರ ಶೆಟ್ಟಿ, ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪಾರ್ಶ್ವನಾಥ್‌, ಮೀನುಗಾರರ ಮುಖಂಡ ಹಿರಿಯಣ್ಣ ಕಿದಿಯೂರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.