ADVERTISEMENT

ಮಗನಿಂದ ದೂರು, ಸೂಕ್ತ ತನಿಖೆಗೆಒತ್ತಾಯ

ಸುಬ್ರಹ್ಮಣ್ಯ: ಬಟ್ಟಕಯದಲ್ಲಿ ನಿರ್ವಾಹಕನ ಶವ ಪತ್ತೆ-– ಸಂಬಂಧಿಕರಿಗೆ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2016, 7:23 IST
Last Updated 29 ಸೆಪ್ಟೆಂಬರ್ 2016, 7:23 IST

ಸುಬ್ರಹ್ಮಣ್ಯ: ಬಸ್‌ನಲ್ಲಿ ಚಿಲ್ಲರೆ ಹಣ ನೀಡುವ ವಿಚಾರದಲ್ಲಿ ಯುವತಿ ಯೊಂದಿಗೆ ವಾಗ್ವಾದ ನಡೆದು ಬಳಿಕ ತೀವ್ರವಾಗಿ ಮನನೊಂದು ಕುಮಾರ ಧಾರ ನದಿಗೆ ಹಾರಿದ ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕ ದೇವದಾಸ್‌ ಶೆಟ್ಟಿ ಅವರ ಮೃತದೇಹ ಸ್ನಾನಘಟ್ಟದಿಂದ ಸುಮಾರು 2 ಕಿ.ಮೀ. ದೂರದ ಬಟ್ಟಕ ಯದಲ್ಲಿ ಬುಧವಾರ ಪತ್ತೆಯಾಗಿದೆ.

ಸತತ ಮೂರು ದಿನಗಳ ಹುಡು ಕಾಟದ ನಂತರವೂ ನಿರ್ವಾಹಕರ ಸುಳಿವು ಲಭಿಸದೆ ತೀವ್ರ ನಿರಾಸೆ ಉಂಟಾ ಗಿತ್ತು. ಆದರೆ ಬುಧವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆಗೆ ಇಳಿದ ಅಗ್ನಿಶಾಮಕ ಸಿಬ್ಬಂದಿಯ ಹುಡುಕಾಟಕ್ಕೆ ಫಲ ಸಿಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ.

ಬಟ್ಟಕಯದಲ್ಲಿ ನೀರಲ್ಲಿ ತೇಲುತ್ತಿದ್ದ ಶವವನ್ನು ಸ್ನಾನಘಟ್ಟಕ್ಕೆ ತಂದು ನಂತರ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರಕ್ಕೆ ಕೊಂಡೊಯ್ಯ ಲಾಯಿತು. ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. 

ಸ್ಥಳಕ್ಕೆ ಸುಳ್ಯ ಸರ್ಕಲ್‌ ಇನ್‌ಸ್ಪೆಕ್ಟರ್‌ ಕೃಷ್ಣಯ್ಯ, ಸುಬ್ರಹ್ಮಣ್ಯ ಠಾಣಾಧಿಕಾರಿ ಗೋಪಾಲ್, ಸುಳ್ಯ ಉಪತಹಶೀಲ್ದಾರ್ ಹಾಗೂ  ಕಂದಾಯ ನಿರೀಕ್ಷಕ ದಯಾ ನಂದ್ ಬಂದು ಶವ ಪರಿಶೀಲನೆ ನಡೆಸಿದರು.

ಮೂರು ದಿನಗಳ ಕಾಲ ನಿರಂತರ ಕಾರ್ಯಾಚರಣೆಗೆ ಸಕಲ ವ್ಯವಸ್ಥೆಯನ್ನು ಕಲ್ಪಿಸಿ ಸಹಕರಿಸಿದ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ  ಉಪಾಧ್ಯಕ್ಷ ದಿನೇಶ್ ಬಿ.ಎನ್, ಸದಸ್ಯರಾದ ರಾಜೇಶ್ ಎನ್.ಎಸ್, ಮೋಹನದಾಸ್ ರೈ, ಉದ್ಯಮಿ ವೇಣುಗೋಪಾಲ್ ಎನ್.ಎಸ್, ರವಿ ಕಕ್ಕೆಪದವು, ನಾರಾಯಣ ಅಗ್ರಹಾರ, ಪ್ರಸಾದ್ ಕೆ.ರೈ, ಕಿಟ್ಟಣ್ಣ ರೈ ದೋಣಿಮಕ್ಕಿ, ಶ್ರೀಕುಮಾರ್, ಗುಂಡ್ಯ ಹಾಗೂ ಪಾಣಿಮಂಗಳೂರಿನ ಮುಳುಗು ತಜ್ಞರಿಗೆ, ಅಗ್ನಿಶಾಮಕ ದಳದವರಿಗೆ ಮತ್ತು ಸಹಕರಿಸಿದ ಎಲ್ಲಾ ಸ್ಥಳಿಯ ಸಾರ್ವಜನಿಕರಿಗೆ ಕುಮಾರಧಾರ ವೃತ್ತದ ಬಳಿ ಶವ ಸಾಗಾಟದ ವಾಹನ ನಿಲ್ಲಿಸಿ ಗದ್ಗತಿತರಾಗಿ  ಸಂಬಂಧಿಕರು ಕೃತಜ್ಞತೆ ಸಲ್ಲಿಸಿದರು.

ತಂದೆಯ ಶವ ದೊರೆತ ಬಳಿಕ ಮಗ ಪವನ್ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದು, ತಮ್ಮ ತಂದೆ ಆತ್ಮಹತ್ಯೆ ಮಾಡಿಕೊಳ್ಳಲು ಆಲಂಗಾರಿನ ಯುವತಿ ಸೌಮ್ಯಾ ಮತ್ತು ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಕಾರಣ, ಅವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಕಾರ್ಮಿಕ ಸಂಘಟನೆಗಳ ಆಕ್ಷೇಪ: ನಮ್ಮೊಂದಿಗೆ ಸುಮಾರು 21 ವರ್ಷಗ ಳಿಂದ ಕರ್ತವ್ಯ ನಿರ್ವಹಿಸುತ್ತಿದ್ದವರು. ಉತ್ತಮ ನಡವಳಿಕೆಯನ್ನು ರೂಪಿಸಿ ಕೊಂಡು ಸಮಾಜದ ಎಲ್ಲಾ ಜನ ರೊಂದಿಗೆ ಉತ್ತಮ ಬಾಂಧ್ಯವ್ಯ ಹೊಂದಿ ದ್ದರು.

ಇದುವರೆಗೆ ಇವರ ಬಗ್ಗೆ ಇಲಾಖೆ ಯಲ್ಲಿ ಯಾವುದೇ ದೂರುಗಳು ದಾಖ ಲಾಗಲಿಲ್ಲ. ಉತ್ತಮ ಕರ್ತವ್ಯ ನಿರ್ವಹ ಣೆಗಾಗಿ ಮೂರು ಬಾರಿ ಪ್ರಶಸ್ತಿಯನ್ನು ಪಡೆದು ಇವರು ಸರ್ವರ ಪ್ರೀತಿ ಪಾತ್ರರಾಗಿದ್ದಾರೆ. ಈ ಘಟನೆ ನಮಗೆ ತೀವ್ರವಾದ ಆಘಾತ ತಂದಿದೆ. ಅವರ ಸಾವಿನ ಹಿಂದೆ ಯಾವುದೋ ಪ್ರಭಲ ಕಾರಣವಿರಬೇಕು ಎಂದು  ಇಂಟಕ್ ಘಟಕದ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಹೇಳಿದ್ದಾರೆ.

ಕಡಬ ಠಾಣೆಯಲ್ಲಿ ಆದಂತಹ ಚರ್ಚೆಯಲ್ಲಿ ಯುವತಿ ₹ 100 ಕೊಟ್ಟರೂ ₹ 500ರೂ ಕೊಟ್ಟಿದ್ದೇನೆ ಎಂದು ಹೇಳಿದ್ದಲ್ಲದೆ ಸಂಬಂಧಿಕರನ್ನು ಠಾಣೆಗೆ ಕರೆಯಿಸಿದ್ದಾಳೆ. ಯಾವುದೇ ಒಬ್ಬ ನಿರ್ವಾಹಕನಿಗೆ  500ರೂವರೆಗಿನ ಹಣವನ್ನು  ತನ್ನ ಒಳ ಉಡುಪಿನ ಹಿಂಬದಿ ಕಿಸೆಯಲ್ಲಿ ಖಾಸಗಿಯಾಗಿ ಹಣ ಇರಿಸಲು ಅವಕಾಶವಿದೆ. ಆದರೆ ಠಾಣಾ ಸಿಬ್ಬಂದಿ ಅವರ ಅಂಗಿ ಪ್ಯಾಂಟ್ ತೆಗೆಸಿ ಒಳಉಡುಪಿನಲ್ಲಿ ಇರಿಸಿದ ಹಣವನ್ನು ತೆಗೆದು ಯುವತಿಗೆ ನೀಡಿದ್ದಾರೆ.

ಇವರು ಠಾಣೆಯಲ್ಲಿ ಯಾವುದೇ ರಾಜಿ ಪಂಚಾ ಯಿತಿ ನಡೆಸಿಲ್ಲ. ಠಾಣಾಧಿಕಾರಿಗಳ ಅನುಪಸ್ಥಿತಿಯಲ್ಲಿ ಯಾವುದೋ ಒತ್ತಾಯಕ್ಕೆ ಮಣಿದು ಅವರ ಮೇಲೆ ಹಲ್ಲೆ ನಡೆದಿರುತ್ತದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥತರಿಗೆ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.