ADVERTISEMENT

ರೈತರಿಗೆ ಮಣ್ಣಿನ ಫಲವತ್ತತೆಯ ಅರಿವು ಅಗತ್ಯ: ಶಾಸಕ ಸುನೀಲ್‌

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 9:19 IST
Last Updated 22 ನವೆಂಬರ್ 2017, 9:19 IST
ಕಾರ್ಕಳ ತಾಲ್ಲೂಕಿನ ಬಜಗೋಳಿ ಗಣಪತಿಕಟ್ಟೆಯಲ್ಲಿ ಉಚಿತ ಮಣ್ಣು ಪರೀಕ್ಷಾ ಶಿಬಿರ ನಡೆಯಿತು. ಶಾಸಕ ವಿ. ಸುನೀಲ್ ಕುಮಾರ್ ಇದ್ದರು.
ಕಾರ್ಕಳ ತಾಲ್ಲೂಕಿನ ಬಜಗೋಳಿ ಗಣಪತಿಕಟ್ಟೆಯಲ್ಲಿ ಉಚಿತ ಮಣ್ಣು ಪರೀಕ್ಷಾ ಶಿಬಿರ ನಡೆಯಿತು. ಶಾಸಕ ವಿ. ಸುನೀಲ್ ಕುಮಾರ್ ಇದ್ದರು.   

ಕಾರ್ಕಳ: ಮಣ್ಣಿನ ಫಲವತ್ತತೆ ಕುರಿತು ರೈತರಿಗೆ ಸಂಪೂರ್ಣ ಅರಿವು ಮೂಡಿಸಿದಲ್ಲಿ ಪೋಷಕಾಂಶಗಳ ಕೊರತೆಗೆ ಅನುಗುಣವಾಗಿ ಕೃಷಿ ಮಾಡಿ ನಮ್ಮ ರೈತರು ಹೆಚ್ಚಿನ ಲಾಭ ಪಡೆಯಬಹುದು ಎಂದು ಶಾಸಕ ವಿ. ಸುನೀಲ್ ಕುಮಾರ್ ತಿಳಿಸಿದರು.

ತಾಲ್ಲೂಕಿನ ಬಜಗೋಳಿ ಗಣಪತಿಕಟ್ಟೆಯಲ್ಲಿ ಶಾಸಕ ವಿ.ಸುನಿಲ್ ಕುಮಾರ್ ಅವರ ಅಧ್ಯಕ್ಷತೆಯ ‘ವಿಕಾಸ’ ಸೇವಾ ಸಂಸ್ಥೆ, ಮಂಗಳೂರಿನ ಎಂ.ಸಿ.ಎಫ್ ಹಾಗೂ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಟ್ರಸ್ಟ್‌ನ ಜಂಟಿ ಸಹಯೋಗದಲ್ಲಿ ಉಚಿತ ಮಣ್ಣು ಪರೀಕ್ಷಾ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

‘ನಮ್ಮ ರೈತರು ತಮ್ಮ ಕೃಷಿ ಜಮೀನಿನ ಮಣ್ಣಿನಲ್ಲಿ ಯಾವ ಯಾವ ಪೋಷಕಾಂಶ ಯಾವ ಪ್ರಮಾಣದಲ್ಲಿದೆ ಎಂಬ ಅರಿವಿಲ್ಲದೆ ಕೃಷಿ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ‘ವಿಕಾಸ ಸೇವಾ’ ಸಂಸ್ಥೆ ಒಂದು ಸಣ್ಣ ಪ್ರಯತ್ನ ಮಾಡಿದೆ. ಇದನ್ನು ತಾಲ್ಲೂಕಿನ ಬೆರೆ ಬೇರೆ ಕಡೆಗಳಲ್ಲಿ ನಡೆಸಲಾಗುವುದು. ಕಣ್ಣಿನ ತೊಂದರೆಯಿಂದ ಬಳಲುತ್ತಿರುವ ಅವಶ್ಯವಿದ್ದ ಎರಿಗೆ ಉಚಿತ ಕಣ್ಣಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಹಾಗೂ ಉಚಿತ ಕನ್ನಡಕವನ್ನು ನೀಡಲಾಗುವುದು’ ಎಂದರು.

ADVERTISEMENT

ಶಿಬಿರದಲ್ಲಿ 500ಕ್ಕೂ ಮಿಕ್ಕಿ ಜನರು ಭಾಗವಹಿಸಿದ್ದರು. ಅವರಲ್ಲಿ 60 ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಹಾಗೂ 180 ಮಂದಿಗೆ ಕನ್ನಡಕ, 12 ಮಂದಿಗೆ ಮುಂದಿನ ಹಂತದ ಚಿಕಿತ್ಸೆ ಅವಶ್ಯಕತೆ ಕಂಡುಬಂದಿದೆ. 40 ಮಂದಿ ಕೃಷಿಕರಿಂದ ಮಣ್ಣು ಪರೀಕ್ಷೆಗೆ ಮಣ್ಣನ್ನು ಸ್ವೀಕರಿಸಲಾಯಿತು.

ಎಂ.ಸಿ.ಎಫ್‌ನ ನಿರ್ದೇಶಕ ಕೆ. ಪ್ರಭಾಕರ್ ರಾವ್ ಹಾಗೂ ಬಜಗೋಳಿ ಯ ಆರೂರ್ ಕ್ಲೀನಿಕ್ಸ್‌ನ ಡಾ.ಎ.ಕೆ.ವೆಂಕಟಗಿರಿ ರಾವ್, ಮಹಾವೀರ್ ಜೈನ್, ಕೂಷ್ಮಾಂಡಿನಿ ಗ್ರೂಫ್ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪಾಟ್ಕರ್ ಉಪಸ್ಥಿತರಿದ್ದರು.

ಎಂ.ಸಿ.ಎಪ್.ನ ಮಾರ್ಕೆಟಿಂಗ್ ವಿಭಾಗದ ಕೀರ್ತನ್ ಕುಮಾರ್ ಶಿಬಿರವನ್ನು ಸಂಯೋಜಿಸಿದರು. ಎಂ.ಸಿ.ಎಫ್‌ನ ಡಾ. ಕೆ.ಯೋಗೀಶ್ ನಿರೂಪಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.