ADVERTISEMENT

ಸಂಕ್ಷಿಪ್ತ ಸುದ್ದಿ- ಉಡುಪಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2015, 5:52 IST
Last Updated 27 ಫೆಬ್ರುವರಿ 2015, 5:52 IST

ಇಂದಿನಿಂದ ಸ್ಮಾರ್ಟ್‌ ಕಾರ್ಡ್‌ ನೀಡುವ ಕಾರ್ಯಕ್ರಮ
ಉಡುಪಿ: ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಡಿ ಬಿಪಿಎಲ್‌ ಕುಟುಂಬದವರಿಗೆ, ನರೇಗಾ ಕೆಲಸ ನಿರ್ವಹಿಸುವವರಿಗೆ ಮತ್ತು ನೇಕಾರರಿಗೆ ಉಚಿತ ಆರೋಗ್ಯ ವಿಮಾ ಸೌಲಭ್ಯದ ಸ್ಮಾರ್ಟ್‌ ಕಾರ್ಡ್‌ ನೀಡುವ ಕಾರ್ಯಕ್ರಮವನ್ನು ಇದೇ 27 ಮತ್ತು 28ರಂದು ಹಾರ್ದಳ್ಳಿ–ಮಂಡಳ್ಳಿ, ಮೊಳಹಳ್ಳಿ, ಹೊಂಬಾಡಿ–ಮಂಡಾಡಿ, ಕಾಳಾವರ ಮತ್ತು ಬೇಲೂರು ಗ್ರಾಮ ಪಂಚಾಯಿತಿಗಳಲ್ಲಿ ಹಮ್ಮಿ ಕೊಂಡಿದ್ದು, ಈ ಪಂಚಾಯಿತಿ ವ್ಯಾಪ್ತಿಯ ಫಲಾನುಭವಿಗಳು ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

ಸುಮಿತ್ರಾ ಬಾಯಿಗೆ ಇನಾಂದಾರ ವಿಮರ್ಶಾ ಪ್ರಶಸ್ತಿ
ಉಡುಪಿ: ವಿಮರ್ಶಕಿ, ಲೇಖಕಿ ಡಾ. ಬಿ.ಎನ್‌. ಸುಮಿತ್ರಾ ಬಾಯಿ ಅವರನ್ನು ಪ್ರೊ. ವಿ.ಎಂ. ಇನಾಂದಾರ್‌ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜೈನಶಾಸ್ತ್ರ ಮತ್ತು ಪ್ರಾಕೃತ ಪರಿಣತೆಯಾಗಿರುವ ಸುಮಿತ್ರಾ ಬಾಯಿ ಅವರು ಸಾರ್ವತ್ರಿಕದೆಡೆಗೆ, ವಿಚಯ, ಅಯನ, ಮಹಿಳೆ ಮತ್ತು ಸಾಹಿತ್ಯ, ಸರಹದ್ದುಗಳ ಆಚೆ, ಸ್ತ್ರೀವಾದಿ ಪ್ರವೇಶಿಕೆ ಮುಂತಾದ ಕೃತಿ ರಚಿಸಿದ್ದಾರೆ. ಮಾರ್ಚ್‌ ತಿಂಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು  ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೇಶಕ ಎಚ್‌. ಕೃಷ್ಣಭಟ್‌ ತಿಳಿಸಿದ್ದಾರೆ.

ಪ್ರಾರ್ಥನಾ ಮಂದಿರಕ್ಕೆ ಕಲ್ಲು: ತೀವ್ರ ಖಂಡನೆ
ಉಡುಪಿ: ಉಳ್ಳಾಲ ಪಾನೀರ್‌ನ ಜೋಸೆಫ್‌ ವಾಜ್‌ ಪ್ರಾರ್ಥನಾ ಮಂದಿರದ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವುದನ್ನು ಉಡುಪಿ ಧರ್ಮಪ್ರಾಂತ್ಯದ ಕೆಥೋಲಿಕ್‌ ಸಭಾ ತೀವ್ರವಾಗಿ ಖಂಡಿಸಿದೆ.

ಕ್ರೈಸ್ತ ಧರ್ಮವನ್ನು ಗುರಿಯಾಗಿಸಿ ನಡೆದಿರುವ ಈ ದಾಳಿ ಖಂಡನೀಯ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನವನ್ನು ವಿಚ್ಛಿದ್ರಕಾರ ಶಕ್ತಿಗಳು ಮಾಡುತ್ತಿವೆ. ಶಾಂತಿಗೆ ಭಂಗ ತರುವ, ವಿವಿಧ ಧರ್ಮಗಳ ಜನರ ಮಧ್ಯೆ ವಿಷ ಬೀಜ ಬಿತ್ತಲು ಪ್ರಯತ್ನಿಸುವ ಕೃತ್ಯದಲ್ಲಿ ತೊಡಗಿರುವವರ ಮೇಲೆ ಮೇಲೆ ಕ್ರಮ ಕೈಗೊಳ್ಳಬೇಕು.  ಚರ್ಚ್‌ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳನ್ನುಕೂಡಲೇ ಬಂಧಿಸಬೇಕು ಎಂದು ಕೆಥೋಲಿಕ್‌ ಸಭಾದ ಅಧ್ಯಕ್ಷ ಕಿರಣ್‌ ಎಲ್‌ ರಾಯ್‌ಕ್ರಾಸ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರವೇಶ ಪತ್ರ ವಿತರಣೆ
ಉಡುಪಿ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದ ಎಎಂಎಲ್‌ ಮತ್ತು ಪ್ರವೇಶ ಪತ್ರಗಳು ಬಂದಿವೆ. ಉಡುಪಿ ಜಿಲ್ಲೆಯ ಎಲ್ಲ ಪ್ರೌಢಶಾಲಾ ಮುಖ್ಯಸ್ಥರು ತಮ್ಮ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಫೆಬ್ರುವರಿ 27ರಂದು ಇವುಗಳನ್ನು ಪಡೆದು ವಿದ್ಯಾರ್ಥಿಗಳಿಗೆ ವಿತರಿಸಬೇಕು.

ಎಎಂಎಲ್ ಭರ್ತಿ ಮಾಡುವ ಕುರಿತು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಅಧಿಕಾರಿಗಳು ಮಾರ್ಚ್3ರಂದು ಉಡುಪಿಯ ಒಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ  ಬೆಳಿಗ್ಗೆ 9.30ಕ್ಕೆ ತರಬೇತಿ ನೀಡುವರು. ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲಾ ಮುಖ್ಯಸ್ಥರು ತರಬೇತಿಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಪಿಂಟೊ
ಉಡುಪಿ: ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಗಣ ರಾಜ್ಯೋತ್ಸವ ಪರೇಡ್‌ನಲ್ಲಿ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಜೋಯಲ್‌ ಲ್ಯಾರಿನ್‌ ಪಿಂಟೊ ಭಾಗವಹಿ ಸಿದ್ದರು. ಅವರು ಉಡುಪಿಯ 21 ಕರ್ನಾಟಕ ಬೆಟಾಲಿ ಯನ್‌ ಮತ್ತು ಕರ್ನಾಟಕ–ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.