ADVERTISEMENT

ಜನಸ್ನೇಹಿ ಪೊಲೀಸಿಂಗ್‌ಗೆ ಒತ್ತು ನೀಡಿದ್ದ ಡಾ. ಸಂಜೀವ್

ಎಂ.ನವೀನ್ ಕುಮಾರ್
Published 2 ಜನವರಿ 2018, 6:18 IST
Last Updated 2 ಜನವರಿ 2018, 6:18 IST

ಉಡುಪಿ: ಬೆಂಗಳೂರು ಪೊಲೀಸ್‌ ವಿಭಾಗದ ಆಡಳಿತ ವಿಭಾಗದ ಡಿಸಿಪಿಯಾಗಿ ವರ್ಗಾವಣೆಯಾಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಎಂ.ಪಾಟೀಲ್ ಅವರು ಕೆಲವೇ ತಿಂಗಳುಗಳ ಕಾಲ ಇಲ್ಲಿದ್ದರೂ ಜನ ಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಲು ತಮ್ಮದೇ ರೀತಿ ಪ್ರಯತ್ನಿಸಿದ್ದರು. ಸಾರ್ವಜನಿಕರನ್ನು ಪೊಲೀಸ್ ಮಾಹಿತಿದಾರರನ್ನಾಗಿ ರೂಪಿಸುವ ಒಂದು ಸಣ್ಣ ಪ್ರಯತ್ನವನ್ನೂ ಅವರು ಮಾಡಿದ್ದರು.

ಪೊಲೀಸರನ್ನು ಕಂಡರೆ ಜನರು ಹೆದರಬಾರದು, ದೂರು ನೀಡಲು ಯಾವುದೇ ಹಿಂಜರಿಕೆ ಇರಬಾರದು ಎಂಬ ಕಾರಣಕ್ಕೆ ಪೊಲೀಸ್ ಮತ್ತು ಸಾರ್ವಜನಿಕರ ಮಧ್ಯೆ ಸೇತುವೆ ನಿರ್ಮಾಣ ಮಾಡಲು ಹಲವು ಕಾರ್ಯಕ್ರಮ ರೂಪಿಸಿದ್ದರು.ಜಿಲ್ಲೆಯ ಪೊಲೀಸ್ ಮುಖ್ಯಸ್ಥರನ್ನು ನೇರವಾಗಿ ದೂರವಾಣಿ ಮೂಲಕ ಸಂಪರ್ಕಿಸುವ ಫೋನ್ ಇನ್ ಕಾರ್ಯಕ್ರಮ ಅದರಲ್ಲಿ ಪ್ರಮುಖವಾದದ್ದು. ಪ್ರತಿ ಶನಿವಾರ ಒಂದು ಗಂಟೆಗಳ ಕಾಲ ಸಾರ್ವಜನಿಕರೊಂದಿಗೆ ಮಾತನಾಡುತ್ತಿದ್ದರು.

ದೂರುಗಳನ್ನು ಸ್ವೀಕರಿಸುವುದು ಮಾತ್ರವಲ್ಲ ಅದಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳನ್ನು ಖುದ್ದು ದೂರವಾಣಿ ಕರೆ ಮಾಡಿ ತಿಳಿಸುವುದಾಗಿ ಅವರು ಭರವಸೆ ನೀಡುತ್ತಿದ್ದರು. ನೇರವಾಗಿ ಎಸ್ಪಿ ಅವರೊಂದಿಗೆ ಮಾತನಾಡುವ ಅವಕಾಶವನ್ನು ಜಿಲ್ಲೆಯ ಜನರು ಸಹ ಸದುಪಯೋಗಪಡಿಸಿಕೊಂಡರು. ಪ್ರತಿ ವಾರ ಫೋನ್ ಇನ್ ಇದ್ದರೂ ಸರಾಸರಿ 25 ಕರೆಗಳು ಬರುತ್ತಿದ್ದವು.

ADVERTISEMENT

ಪೊಲೀಸ್ ಇಲಾಖೆಗೆ ನೇರವಾಗಿ ಸಂಬಂಧಿಸದ ವಿಷಯಗಳಿಗೂ ಸ್ಪಂದಿಸುತ್ತಿದ್ದರು ಎಂಬುದು ಇನ್ನೊಂದು ವಿಶೇಷತೆ. ಉದಾಹರಣೆಗೆ ಅದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದ್ದರೆ ಆ ಇಲಾಖೆಗೆ ಮಾಹಿತಿ ನೀಡಲಾಗುವುದು ಎಂದು ಅವರು ಹೇಳುತ್ತಿದ್ದರು. ಕರ್ತವ್ಯದ ಗಡಿಯಾಚೆ ಹೋಗಿ ನೆರವು ನೀಡಲು ಪ್ರಯತ್ನಿಸುತ್ತಿದ್ದರು.

ಉಡುಪಿ ನಗರದ ಸಂಚಾರ ವ್ಯವಸ್ಥೆ ಹಾಗೂ ಅನಧಿಕೃತ ವಾಹನ ನಿಲುಗಡೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಕೆಲವೊಮ್ಮೆ ಖುದ್ದಾಗಿ ಸ್ಥಳಕ್ಕೆ ಹೋಗಿ ವಾಹನಗಳನ್ನು ತೆರವುಗೊಳಿ ಅಂಗಡಿ ಮಾಲೀಕರಿಗೆ ಎಚ್ಚರಿಕೆಯನ್ನೂ ನೀಡಿದ್ದರು.

ಸಾವಿರಾರು ಸಂತರು ಭಾಗವಹಿಸಿದ್ದ ಮೂರು ದಿನಗಳ ಕಾಲ ನಡೆದ ಧರ್ಮ ಸಂಸತ್ ಸಮ್ಮೇಳನದ ವೇಳೆಯೂ ಒಂದೇ ಒಂದು ಸಣ್ಣ ಅಹಿತಕರ ಘಟನೆ ನಡೆದಿರಲಿಲ್ಲ ಎಂದು ಉಲ್ಲೇಖಿಸಬಹುದು.

ಮಹಿಳೆಯರು ಯಾವುದೇ ಠಾಣೆಯಲ್ಲಿ ದೂರು ನೀಡಬಹುದು

ಮಹಿಳೆಯರ ಮೇಲಿನ ದೌರ್ಜನ್ಯ ಕುರಿತ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ, ಮಹಿಳೆಯರು ಕೇವಲ ಮಹಿಳಾ ಠಾಣೆಗಳಲ್ಲಿ ಮಾತ್ರ ದೂರು ನೀಡಬೇಕಾಗಿದ್ದು ಅದರಿಂದ ತೊಂದರೆ ಆಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಇದಕ್ಕೆ ಕೂಡಲೇ ಸ್ಪಂದಿಸಿದ್ದ ಎಸ್ಪಿ ಅವರು, ಮಹಿಳೆಯರು ಸಮೀಪದ ಯಾವುದೇ ಠಾಣೆಯಲ್ಲಿಯೂ ದೂರು ನೀಡಿದರೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಸಣ್ಣ ಪುಟ್ಟ ದೂರುಗಳಿದ್ದರೂ ಮಹಿಳಾ ಪೊಲೀಸ್ ಠಾಣೆಗೆ ಹೋಗಬೇಕಾದ ಸ್ಥಿತಿಯನ್ನು ಬದಲಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.